ರಾಮನಗರ: ಇತಿಹಾಸ ಪ್ರಸಿದ್ಧ ರಾಮನಗರ ಕರಗ ಮಹೋತ್ಸವದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಹಾಡುಗಳಿಗೆ ನಿಷೇಧ ಹೇರಿದ್ದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಖುದ್ದು ಜೆಡಿಎಸ್ ಮುಖಂಡರೇ ಕಾರ್ಯಕ್ರಮದಲ್ಲಿ ದರ್ಶನ್ ನಟನೆಯ ಚಿತ್ರಗಳನ್ನು ಹಾಡಲೇಬಾರದು ಅಂತ ತಾಕೀತು ಮಾಡಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ ಪಟ್ಟಣದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕರಗ ಈ ಬಾರಿ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿ ಪ್ರತಿ ಬಾರಿ ನಡೆಯುವ ಈ ಅದ್ದೂರಿ ಕರಗ ಮಹೋತ್ಸವದಲ್ಲಿ ಬುಧವಾರ ಸಂಜೆ ಮನರಂಜನಾ ಕಾರ್ಯಕ್ರಮದಲ್ಲಿ ನಟ ದರ್ಶನ್ ಅಭಿನಯಿಸಿರುವ ಯಾವುದೇ ಚಿತ್ರದ ಹಾಡುಗಳನ್ನು ಹಾಡಲಾಗಿಲ್ಲ. ಕಾರಣ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಜೆಡಿಎಸ್ ಮುಖಂಡರು ಈ ಕುರಿತು ತಾಕೀತು ಮಾಡಿದ್ದರು ಎನ್ನಲಾಗಿದೆ. ಇನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸುಮಲತಾ ವಿರುದ್ಧ ಸ್ಪರ್ಧಿಸಿ ಸೋತಿದ್ದಕ್ಕೆ ಜೋಡೆತ್ತುಗಳು ಅಂತಾನೇ ಖ್ಯಾತಿ ಪಡೆದಿದ್ದ ನಟರಾದ ದರ್ಶನ್ ಹಾಗೂ ಯಶ್ ಕಾರಣ ಅನ್ನೋದು ಜೆಡಿಎಸ್ ಅಭಿಪ್ರಾಯ.
ಸುಮಾರು 3-4 ಗಂಟೆ ನಡೆದ ಈ ಮನರಂಜನಾ ಕಾರ್ಯಕ್ರಮದ ನೇತೃತ್ವವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಖ್ಯಾತ ಗಾಯಕ ವಿಜಯ್ ಪ್ರಕಾಶ್ ವಹಿಸಿಕೊಂಡಿದ್ದರು. ಸುಮಾರು ಹೊತ್ತು ಕಳೆದರೂ ದರ್ಶನ್ ಅಭಿನಯದ ಚಿತ್ರ ಹಾಡನ್ನು ಹಾಡದಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ದಚ್ಚು ಅಭಿಮಾನಿಗಳು ಅಲ್ಲೇ ಡಿ-ಬಾಸ್ , ಡಿ- ಬಾಸ್ ಅಂತ ಕೂಗಲಾರಂಭಿಸಿದ್ರು. ಇದಕ್ಕೂ ಕ್ಯಾರೆ ಎನ್ನದ ಜೆಡಿಎಸ್ ಮುಖಂಡರು ಯಾವುದೇ ಕಾರಣಕ್ಕೂ ದರ್ಶನ್ ಹಾಡು ಹಾಡುವಂತಿಲ್ಲ ಅಂತ ಖಡಕ್ಕಾಗಿ ಸೂಚಿಸಿದ್ರಂತೆ.
![](http://karnatakatv.net/wp-content/uploads/2019/07/darashan-post.png)
ಇನ್ನು ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸೋಲಿನಿಂದ ಇನ್ನೂ ಹೊರಬಾರದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ದರ್ಶನ್ ಹಾಡಿಗೆ ನಿಷೇಧ ಹೇರಿದ್ದು ಡಿ ಬಾಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದರ್ಶನ್ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.