www.karnatakatv.net: ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಸ್ಮಾರ್ಟ್ ಮಾಡಲು ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಕೆಲವು ದೊಡ್ಡ ಕೈಗಳ ಕೈ ಚಳಕದಿಂದ ಅವಳಿನಗರ ಸ್ಮಾರ್ಟ್ ಸಿಟಿ ಆಗದೇ ಅಲ್ಲೋಲ್ಲ ಕಲ್ಲೋಲ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನ್ಯೂಸ್ ವರದಿಯ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈಗ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಹೌದು. ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಏಕಾಏಕಿ ಸಾರ್ವಜನಿಕ ಬಸ್ ನಿಲ್ದಾಣ ಹಾಗೂ ಫುಟ್ ಪಾತ್ ಮಾಯವಾಗಿದೆ. ಇಷ್ಟು ದಿನ ಇದ್ದ ಬಸ್ ಸ್ಟಾಪ್ ಧಿಡೀರ್ ಮಾಯವಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ಇದ್ದ ಬಸ್ ನಿಲ್ದಾಣವೇ ಮಂಗಮಾಯಾ ಆಗಿತ್ತು. ಈ ಬಗ್ಗೆ ನಮ್ಮ ಕರ್ನಾಟಕ ನ್ಯೂಸ್ ವರದಿಯನ್ನು ಭಿತ್ತರಿಸಿದ ಬೆನ್ನಲ್ಲೇ ಪಾಲಿಕೆ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡುವ ಮೂಲಕ ಕಟ್ಟಡದ ಮಾಲೀಕರಿಗೆ ಶಾಕ್ ನೀಡಿದ್ದಾರೆ.
ನೂತನ ಕಟ್ಟಡ ಕಾಮಗಾರಿಗೆ ಬಸ್ ನಿಲ್ದಾಣ ಅತಿಕ್ರಮಣವಾಗಿತ್ತು. ಕಟ್ಟಡ ಕಟ್ಟುವ ನೆಪದಲ್ಲಿ ಫುಟ್ ಪಾತ್ ಜೊತೆಗೆ ಬಸ್ ನಿಲ್ದಾಣವನ್ನೇ ಅತಿಕ್ರಮಿಸಿದ್ದಾರೆ. ಅಲ್ಲದೇ ದೊಡ್ಡ ದೊಡ್ಡವರ ಕಟ್ಟಡ ಕಾರ್ಯಕ್ಕೆ ಬಸ್ ನಿಲ್ದಾಣ ಹಾಗೂ ಪುಟ್ ಪಾತ್ ಅತಿಕ್ರಮಣವಾಗಿತ್ತು. ಈ ಬಗ್ಗೆ ಕೂಡ ಕರ್ನಾಟಕ ನ್ಯೂಸ್ ವರದಿಯಿಂದ ಈಗ ಪಾಲಿಕೆ ಕಾರ್ಯಾಚರಣೆ ನಡೆಸಿ ಅವಳಿನಗರದ ಅನಧಿಕೃತ ಹಾಗೂ ಅಕ್ರಮ ಕಟ್ಟಡಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಸುನಿಲ್ ಕೊಠಾರಿ ಎನ್ನುವವರಿಂದ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಪಾಲಿಕೆಯ ಹಲವು ನೋಟಿಸ್ ಗೂ ಕ್ಯಾರೆ ಎನ್ನದೇ ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಬಹು ಅಂತಸ್ತಿನ ಕಟ್ಟಡಕ್ಕೆ ರಾಜಕಾರಣಿಗಳ ಆಶೀರ್ವಾದದಿಂದ ಬಸ್ ನಿಲ್ದಾಣ ಮಾಯವಾಗಿತ್ತು. ಇನ್ನೂ ಬಸ್ ಸ್ಟಾಪ್ ನಿಂದ ೪ ಅಡಿ ದೂರವಿರಬೇಕಿದ್ದ ಕಟ್ಟಡ. ಆದರೆ ಬಸ್ ಸ್ಟಾಪ್ ಮುಚ್ಚಿ ಕಾಮಗಾರಿ ಆರಂಭಿಸಿರುವ ಮಾಲೀಕನ ನಡೆಯಿಂದ ಬಸ್ ನಿಲ್ದಾಣವಿಲ್ಲದೆ ಸ್ಥಳೀಯರು ಪರದಾಡುವಂತಾಗಿತ್ತು. ಕೂಡಲೇ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಿದ್ದು, ಈಗ ಇಂತಹ ಪ್ರಕರಣ ವಿರುದ್ಧ ಹದ್ದಿನ ಕಣ್ಣು ಇರಿಸಿದೆ.
ಕರ್ನಾಟಕ ಟಿವಿ- ಹುಬ್ಬಳ್ಳಿ