ಕರ್ನಾಟಕ ಟಿವಿ ಸಂಪಾದಕೀಯ : ಸಾಕು ಈ ಬೇರೆ ಊರಿನ ಸಹವಾಸ.. ಹುಲ್ಲು ತಿಂದರೂ ಪರವಾಗಿಲ್ಲ ನಮ್ಮೂರೇ ನಮಗೆ ಮೇಲೂ ಅಂತ ಅವರು ಹೊರಟಿದ್ರು.. ಮೈನ್ ರೋಡಲ್ಲಿ ಹೋದ್ರೆ ಪೊಲೀಸರ ಕಾಟ ಅಂತ ಮಹಾರಾಷ್ಟ್ರದ ಜಲ್ನಾದ ಸ್ಟೀಲ್ ಫ್ಯಾಕ್ಟರಿಯಿಂದ ಸುಮಾರು 65 ಕಿಲೋಮೀಟರ್ ರೇಲ್ವೆ ಟ್ರಾಕ್ ಮೇಲೆ ನಡೆದುಕೊಂಡೇ ಸಾಗಿದ್ರು.. ಕತ್ತಲಾಗಿತ್ತು.. ರೈಲ್ವೆ ಟ್ರಾಕ್ ನ ಕಂಬಿ ಹಾಗೂ ಕಲ್ಲುಗಳ ನಡುವೆ ಹೆಜ್ಜೆ ಹಾಕಿದ್ದ ಆ ಕಾಲುಗಳು ಸೋತು ಹೋಗಿದ್ವು.. ಸ್ವಲ್ಪ ರೆಸ್ಟ್ ಮಾಡೋಣ ಮುಂಜಾನೆ ಬೇಗ ಎದ್ದು ಹೋಗೋಣ ಅಂತ ರೇಲ್ವೆ ಹಳಿಯನ್ನೇ ದಿಂಬು ಮಾಡಿಕೊಂಡು ಮಲಗಿದ್ರು.. ಮಲಗಿದ ಕೂಡಲೇ ದಣಿವಾಗಿದ್ದ ದೇಹ ನಿದ್ದೆಗೆ ಜಾರಿತ್ತು.. 20-22 ಜನರಿದ್ದ ಆ ತಂಡ ನಾಳೆ ಸಂಜೆ ವೇಳೆಗೆ ನಾವು ಊರು ಸೇರ್ತೇವೆ ಅನ್ನುವ ಕನಸ್ಸನ್ನ ಹೊತ್ತು ಕತ್ತಲಲ್ಲಿ ಕಣ್ಣು ಮುಚ್ಚಿದ್ರು. ಆದ್ರೆ, ಕಷ್ಟವೇ ಮೈಮೇಲೆ ಹೊದ್ದು ಮಲಗಿದವರ ಜೀವದ ಬೆಲೆ ಆ ಗೂಡ್ಸ್ ರೈಲಿಗೆ ಗೊತ್ತೇ ಆಗಲಿಲ್ಲ.. ಶ್ರಮಿಕ್ ಸ್ಪೆಷಲ್ ಟ್ರೈನ್ ಹಿಡಿದು ಮಧ್ಯಪ್ರದೇಶದ ತಮ್ಮೂರಿಗೆ ಹೋಗಲು ಕಾತುರರಾಗಿದ್ದ ಶ್ರಮಿಕರ ಮೇಲೆ ಮುಂಜಾನ 5.30 ಕ್ಕೆ ರೈಲು ಹಾದು ಯೋಯ್ತು.. ಕ್ಷಣ ಮಾತ್ರದಲ್ಲೇ 16 ಶ್ರಮಿಕರ ದೇಹ ತುಂಡುತುಂಡಾಗಿ ಹೋಯ್ತು.. ಟ್ರ್ಯಾಕ್ ಪಕ್ಕದಲ್ಲಿ ಮಲಗಿದ್ದವರಲ್ಲಿ ಐವರು ಗಂಭೀರವಾಗಿ ಗಾಯಗೊಂಡ್ರೆ ಇಬ್ಬರು ದೂರ ಮಲಗಿದ್ದ ಕಾರಣ ಬದುಕುಳಿದಿದ್ದಾರೆ.. ದೇಶದಲ್ಲಿ ಕೊರೊನಾ ಬಂದು ಸಾವನ್ನಪ್ಪಿದ್ದಕ್ಕಿಂತ ಕೊರೊನಾ ಪರಿಣಾಮದಿಂದ ಮೇಲ್ನೋಟಕ್ಕೆ ನೂರಾರು.. ನಮಗೆ, ನಿಮಗೆ ಗೊತ್ತಿಲ್ಲದಂತೆ ಸಾವಿರಾರು ಜನ ಸಾವಿನ ಮನೆ ಮನೆ ಸೇರಿದ್ದಾರೆ.. ಬಡವರನ್ನ ಹಸಿವು ಕಿತ್ತು ತಿಂತಿದ್ತೆ, ಮಧ್ಯಮವರ್ಗದವರನ್ನ ಮಾನ ಮರ್ಯಾದೆಯೇ ಮೂರಾಬಟ್ಟೆ ಮಾಡಿಬಿಟ್ಟಿದೆ.. ರೈತರ ರಕ್ತ ಕಣ್ಣಿರು ಎಲ್ಲರಿಗೂ ಕಾಣ್ತಿದೆ.. ಬಡವರಿಗೆ, ಮಧ್ಯಮವರ್ಗದವರಿಗೆ, ರೈತರಿಗೆ ಈಗ ಎಷ್ಟೇ ಸಹಯಾ ಮಾಡ್ತಿದ್ರು.. ಅದು ಅರೆ ಕಾಸಿನ ಮಜ್ಜಿಗೆಯೇ ಸರಿ..
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ