ಟೀಮ್ ಇಂಡಿಯಾದ ವಿಶ್ವಕಪ್ ಗೆಲುವಿನ ಕನಸು ಭಗ್ನವಾಗಿ ಮೂರು ದಿನಗಳು ಕಳೆದಿವೆ. ಈ ನಡುವೆ ಸೋಲಿಗೆ ಕಾರಣವೇನು ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಲಿ ಮಾಜಿಗಳೆನ್ನದೇ, ಒಬ್ಬೊಬ್ಬರು ಒಂದೊಂದು ರೀತಿ ಸೋಲಿಗೆ ಕಾರಣಗಳನ್ನ ನೀಡುತ್ತಿದ್ದಾರೆ. ಈ ನಡುವೆ ಈ ಮಾಜಿ ಆಟಗಾರ ಮಾತ್ರ, ಸೆಮಿಫೈನಲ್ ನಲ್ಲಿ ಭಾರತದ ಸೋಲಿಗೆ ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎನ್ನುತ್ತಿದ್ದಾರೆ.
ಹೌದು… ಭಾರತದ ಮಾಜಿ ಕ್ರಿಕೆಟರ್… ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಪ್ರಕಾರ, ಸೆಮೀಸ್ ನಲ್ಲಿ ಭಾರತ ಸೋಲು ಕಾಣಲು ಧೋನಿಯ ನಿಧಾನಗತಿಯ ಬ್ಯಾಟಿಂಗ್ ಕಾರಣವಂತೆ. ಒಂದು ಕಡೆ ರವೀಂದ್ರ ಜಡೇಜಾ, ಬಿರುಸಿನ ಆಟ ನಡೆಸುತ್ತಿದ್ರೆ ಮತ್ತೊಂದು ಕಡೆ ಧೋನಿ ನಿಧಾನಗತಿಯಲ್ಲಿ ರನ್ ಗಳಿಸುತ್ತಿದ್ರು.
ಹೀಗಾಗಿ ರನ್ ಗಳಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದ ಜಡೇಜಾ, ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ತದನಂತರ ತಂಡವನ್ನ ಗೆಲುವಿನ ದಡ ಸೇರಿಸಬೇಕಾದ ಧೋನಿ, ರನ್ ಔಟ್ ಆಗಿ ಹೊರ ನಡೆದ್ರು. ಪರಿಣಾಮವಾಗಿ ತಂಡ ವಿಶ್ವಕಪ್ ನಿಂದಲೇ ಹೊರ ಬೀಳಬೇಕಾಯಿತು ಎಂದಿದ್ದಾರೆ. ಈ ಮೂಲಕ ವಿಶ್ವಕಪ್ ಗೆಲ್ಲುವ ಸುವರ್ಣ ಅವಕಾಶ ಕೈತಪ್ಪುವಂತಾಯಿತು ಎಂದು ದೂರಿದ್ದಾರೆ.