Saturday, July 27, 2024

Latest Posts

ಇವರೇನಾ ತ್ರಿಶಂಕು ಸ್ಥಿತಿ ತಲುಪೋ ಅ’ತೃಪ್ತ’ಶಾಸಕರು..!??

- Advertisement -

ಬೆಂಗಳೂರು: ಅತೃಪ್ತ ಶಾಸಕರನ್ನೇ ದಾಳವಾಗಿ ಉಪಯೋಗಿಸಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿರೋ ಬಿಜೆಪಿ ಇದೀಗ ಅತೃಪ್ತರ ಪೈಕಿ ಕೆಲವರಿಗೆ ಕೈ ಕೊಡಲು ಮುಂದಾಗಿದೆ ಎನ್ನಲಾಗಿದೆ.

ಸರ್ಕಾರ ರಚಿಸೋ ಕುರಿತಾಗಿ ಅವಸರ ಬೇಡ ನಿಧಾನವೇ ಪ್ರಧಾನ ಅಂತ ಸೂಚನೆ ನೀಡಿರೋ ಹೈಕಮಾಂಡ್ ಆದೇಶದಂತೆಯೇ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ತಿದ್ದಾರೆ. ಹೀಗಾಗಿಯೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬೇಗನೆ ನಡೆಸಿ ಅಂತ ಅವಸರ ಮಾಡಿದ್ದ ಬಿಜೆಪಿ ಇದೀಗ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ. ಇನ್ನು ರಾಜ್ಯ ಬಿಜೆಪಿ ನಾಯಕರಿಗೆ ಇದೀಗ ಬಿಸಿ ತುಪ್ಪವಾಗಿ ಪರಿಣಮಿಸಿರೋ ಅತೃಪ್ತರಿಗೆ ಯಾವ ಸ್ಥಾನ ನೀಡಬೇಕೆಂಬುದೇ ದೊಡ್ಡ ಸವಾಲಾಗಿದೆ.

ಪಕ್ಷೇತರರಿಗೆ ಮಂತ್ರಿಗಿರಿ ಖಚಿತಪಡಿಸಿರೋ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ನ ಅತೃಪ್ತರ ಪೈಕಿ 4 ಮಂದಿ ಶಾಸಕರಿಗೆ ಕೈ ಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಪ್ರಮುಖವಾಗಿ ಮಸ್ಕಿಯ ಕಾಂಗ್ರೆಸ್ ಶಾಸಕ ಪ್ರತಾಪ ಗೌಡ ಪಾಟೀಲ, ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ, ಅಥಣಿಯ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಮುನಿರತ್ನರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರಲು ರಾಜ್ಯ ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ನಾಲ್ವರಲ್ಲಿ ಶಾಸಕ ಮುನಿರತ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಡಲೇಬೇಡಿ ಇದರಿಂದ ಸ್ಥಳೀಯ ಮುಖಂಡರಿಗೆ ಮುಜುಗರವಾಗಲಿದೆ ಅಂತ ಈಗಾಗಲೇ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಅಮಿತ್ ಶಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವನ್ನೂ ರವಾನಿಸಿದ್ದಾರಂತೆ. ಒಂದೊಮ್ಮೆ ಇವರೆಲ್ಲರಿಗೂ ಸ್ಥಾನ ಕೈತಪ್ಪಿದ್ರೆ, ಮೈತ್ರಿ ಸದಸ್ಯರು ಹೇಳಿದ ಹಾಗೆ ಈ ನಾಲ್ವರು ಅತೃಪ್ತರು ಎಲ್ಲಿಯೂ ಜಾಗವಿಲ್ಲದೆ ತ್ರಿಶಂಕು ಸ್ಥಿತಿ ಎದುರಿಸಲಿದ್ದಾರೆ.

ಇನ್ನು ವಿಶ್ವಾಸಮತ ಯಾಚನೆಯಂದು ಸದನದಲ್ಲಿ ಅತೃಪ್ತರ ಕುರಿತು ಚರ್ಚೆಗಿಳಿದಿದ್ದ ಕಾಂಗ್ರೆಸ್-ಜೆಡಿಎಸ್ ನ ಸದಸ್ಯರು, ಬಿಜೆಪಿ ಕೆಲವರಿಗೆ ಮಂತ್ರಿಗಿರಿ ನೀಡೋದಾಗಿ ಆಮಿಷವೊಡ್ಡಿದೆ, ಇನ್ನೂ ಕೆಲವರಿಗೆ ಹಣದ ಆಮಿಷವೊಡ್ಡಿ ಅವರನ್ನು ಕೊಂಡುಕೊಂಡಿದೆ ಅಂತ ಆರೋಪಿಸಿತ್ತು. ಹೀಗಾಗಿ ಈ ನಾಲ್ವರು ಅತೃಪ್ತರು ಯಾವ ಪಟ್ಟಿಗೆ ಸೇರುತ್ತಾರೆ ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

- Advertisement -

Latest Posts

Don't Miss