ನವಗ್ರಹದಲ್ಲಿ ಎರಡನೇ ಗ್ರಹವಾದ ಚಂದ್ರನ ಇನ್ನೊಂದು ಹೆಸರು ಸೋಮ. ವಾರದ ಎರಡನೇಯ ದಿನವಾಗ ಸೋಮವಾರವನ್ನು ಸೋಮನಿಗಾಗಿ ಅಂದ್ರೆ ಚಂದ್ರನಿಗಾಗಿ ಮೀಸಲಿಡಲಾಗುತ್ತದೆ. ಚಂದ್ರ ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ನವಗ್ರಹದಲ್ಲಿ ಚಂದ್ರನಿಗೆ ಯಾರೂ ಶತ್ರುಗಳಿಲ್ಲ. ಆದ್ರೆ ಬುಧನಿಗೆ ಚಂದ್ರನೇ ಶತ್ರು. ಇನ್ನು ಈ ಚಂದ್ರ ದೇವ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಚಂದ್ರ ದೇವನ ಹುಟ್ಟಿನ ಬಗ್ಗೆ ಹಲವು ಕಥೆಗಳಿದೆ. ಅವುಗಳಲ್ಲಿ ಮೊದಲನೇಯದನ್ನ ತಿಳಿಯೋಣ. ಚಂದ್ರ ಕ್ಷೀರ ಸಾಗರದಲ್ಲಿ ಉದ್ಧವವಾದ ಗ್ರಹವಾಗಿದ್ದು, ಇವನ ಹೊಳಪಿನಿಂದ ದೇವತೆಗಳು ಕಣ್ಣು ಕಳೆದುಕೊಳ್ಳುವ ಭಯದಲ್ಲಿದ್ದರು. ಆಗ ದೇವತೆಗಳೆಲ್ಲ ಸೇರಿ ಚಂದ್ರನನ್ನು ಬ್ರಹ್ಮಾಂಡಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು.
ಇನ್ನು ಎರಡನೇಯ ಕಥೆ ಅನಸೂಯಾ ದೇವಿ ಮತ್ತು ಅತ್ರಿ ಮುನಿಗಳದ್ದು. ತ್ರಿಮೂರ್ತಿಗಳು ಸೇರಿ ಅನುಸೂಯಾಳ ಪಾತಿವೃತ್ಯವನ್ನ ಪರೀಕ್ಷಿಸಿಬೇಕೆಂದು ನಿರ್ಧರಿಸಿ ಆಕೆಯ ಮನೆಗೆ ಭೋಜನಕ್ಕೆ ತೆರಳುತ್ತಾರೆ. ನೀವು ನಮಗೆ ಭೋಜನ ನೀಡಿ ಸಂತೃಪ್ತರನ್ನಾಗಿ ಮಾಡಬೇಕೆಂದು ಅನುಸೂಯಾಳಲ್ಲಿ ಕೇಳುತ್ತಾರೆ. ಆಗ ಅನುಸೂಯಾ ಮತ್ತು ಅತ್ರಿ ಮುನಿಗಳು ತ್ರಿಮೂರ್ತಿಗಳನ್ನು ಬರ ಮಾಡಿಕೊಳ್ಳುತ್ತಾರೆ.
ಊಟ ಬಡಿಸುವ ವೇಳೆ ತ್ರಿಮೂರ್ತಿಗಳು, ನೀವು ನಮಗೆ ಭೋಜನ ನೀಡುವುದಕ್ಕೂ ಮುನ್ನ ನಮ್ಮದು ಕೆಲ ಷರತ್ತುಗಳಿವೆ. ಅವನ್ನು ಈಡೇರಿಸಿದರೆ ಮಾತ್ರ ನಾವು ಸಂತೃಪ್ತಿಗೊಳ್ಳುತ್ತೇವೆಂದು ಹೇಳುತ್ತಾರೆ. ಅದಕ್ಕೆ ಒಪ್ಪಿದ ಅನುಸೂಯಾ ಮಮತ್ತು ಅತ್ರಿ ಮುನಿಗಳು ಷರತ್ತಿನ ಬಗ್ಗೆ ಕೇಳುತ್ತಾರೆ. ದೇವಿ ಅನುಸೂಯಾ, ನೀನು ವಸ್ತ್ರವನ್ನು ಧರಿಸದೇ ನಮಗೆ ಉಣ ಬಡಿಸಬೇಕು ಎನ್ನುತ್ತಾರೆ. ಆಗ ಅತ್ರಿ ಮುನಿಗಳು ಚಿಂತೆಗೀಡಾಗುತ್ತಾರೆ.
ಆದ್ರೆ ಅನುಸೂಯಾ ದೇವಿ, ಆಗಲಿ ಎಂದು ಹೇಳಿ, ತನ್ನ ಶಕ್ತಿಯಿಂದ ತ್ರಿಮೂರ್ತಿಗಳನ್ನು ಬಾಲಕರನ್ನಾಗಿ ಮಾಡುತ್ತಾಳೆ. ಮತ್ತು ವಸ್ತ್ರ ಧರಿಸದೇ ಹಾಲುಣಿಸುತ್ತಾಳೆ. ಆಗ ನಾರದರು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಗೆ ನಿಮ್ಮ ಪತಿಯರನ್ನ ಮತ್ತೆ ಮೊದಲಿನ ಸ್ಥಿತಿಗೆ ತರುವಂತೆ ಕೇಳಿಕೊಳ್ಳಿ. ಇಲ್ಲದಿದ್ದಲ್ಲಿ, ತ್ರಿಮೂರ್ತಿಗಳು ಅನುಸೂಯಾಳಲ್ಲೇ ಉಳಿಯುತ್ತಾರೆ ಎಂದು ಹೇಳುತ್ತಾರೆ. ಆಗ ದೇವಿಯರು ಅನುಸೂಯಾಳ ಬಳಿ ಕ್ಷಮೆ ಕೇಳಿ, ತ್ರಿಮೂರ್ತಿಗಳನ್ನು ಹಿಂದಿರುಗಿಸುವಂತೆ ಕೇಳುತ್ತಾರೆ. ಬಾಲಕರು ತ್ರಿಮೂರ್ತಿಗಳಾಗಿ ಬದಲಾಗುತ್ತಾರೆ.
ನಂತರ ಮಕ್ಕಳಿಲ್ಲದೇ ಕೊರಗುತ್ತಿದ್ದ ಅನುಸೂಯಾ ಮತ್ತು ಅತ್ರಿ ಋಷಿಗೆ ಪುತ್ರ ಪ್ರಾಪ್ತಿರಸ್ತು ಎಂದು ವರ ಸಿಗುತ್ತದೆ. ಚಂದ್ರ, ದತ್ತಾತ್ರೇಯ, ದುರ್ವಾಸ ಎಂಬ ಪುತ್ರರು ಜನಿಸುತ್ತಾರೆ. ಇದು ಚಂದ್ರನ ಕುರಿತಾಗಿರುವ ಎರಡನೇಯ ಕಥೆ.