ಸೂರ್ಯವಂಶದ ರಾಜನಾಗಿದ್ದ ಸಾಗರನಿಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂಬ ಬಯಕೆ ಇತ್ತು.. ಅವನು ಇಷ್ಟು ಮಕ್ಕಳನ್ನೇಕೆ ಪಡೆಯಬೇಕೆಂದು ಹಂಬಲಿಸಿದ..? ಆಮೇಲೇನಾಯಿತು..? ಈ ಎಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..
ಒಮ್ಮೆ ಸಾಗರ ರಾಜ, ತನ್ನ ಗುರುಗಳ ಬಳಿ ಹೋಗಿ, ನೆಮ್ಮದಿಗಾಗಿ, ಆತ್ಮ ಸಂತೋಷಕ್ಕಾಗಿ ನಾನೇನು ಮಾಡಬೇಕು. ನನ್ನ ಬಳಿ ಹಣವಿದೆ, ಚಿನ್ನಾಭರಣ, ವಜ್ರ ವೈಢೂರ್ಯ, ಸಾಮ್ರಾಜ್ಯ ಎಲ್ಲವೂ ಇದೆ. ಆದ್ರೆ ಆತ್ಮ ಶಾಂತಿ ಮತ್ತು ನೆಮ್ಮದಿ ಪಡಿಯೋಕ್ಕೆ ಏನಿರಬೇಕೋ ಅದೇ ಇಲ್ಲ ನನ್ನ ಬಳಿ. ಏನೋ ಕಳೆದುಕೊಂಡಂತಿದೆ, ಅದನ್ನು ಪಡೆಯಬೇಕೆಂಬ ಹಂಬಲ ಎನ್ನುತ್ತಾನೆ.
ಅದಕ್ಕೆ ಆತನ ಗುರುಗಳು, ನೀನು ಹೋದ ಜನ್ಮದಲ್ಲಿ ಬಡ ಬ್ರಾಹ್ಮಣನಾಗಿದ್ದೆ. ನಿನಗೆ ಬರೀ ಹೆಣ್ಣುಮಕ್ಕಳೇ ಇದ್ದರು. ತನ್ನಿಂದಂತೂ ಈ ಸಮಾಜಕ್ಕೆ ದುಡ್ಡಿನ ಮೂಲಕ ಏನು ಮಾಡಲೂ ಸಾಧ್ಯವಾಗಲಿಲ್ಲ. ತನ್ನ ಮಕ್ಕಳಿಂದಾದರೂ ಈ ಸಮಾಜಕ್ಕೆ ಒಳಿತಾಗಲೆಂದು ಯೋಚಿಸಿ, ತನ್ನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ. ಅವರನ್ನ ಒಳ್ಳೆಯ ಕುಲದ ವರನಿಗೆ ಕೊಟ್ಟು ಮದುವೆ ಮಾಡಿದ. ಹಿಂದೂ ಧರ್ಮದಲ್ಲಿ ಕನ್ಯಾದಾನವೆಂದರೆ ಶ್ರೇಷ್ಠ ಕೆಲಸ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಿಂದಿನ ಜನ್ಮದಲ್ಲಿ ನೀನು ನಿನಗೆ ಹುಟ್ಟಿದ ಹೆಣ್ಣು ಮಕ್ಕಳಿಗೆ ಕನ್ಯಾದಾನ ಮಾಡಿ ಕೊಟ್ಟು, ಪುಣ್ಯ ಪ್ರಾಪ್ತಿ ಮಾಡಿಕೊಂಡು, ನೆಮ್ಮದಿಯಾಗಿ ಜೀವನ ಕಳೆದೆ ಎನ್ನುತ್ತಾರೆ.
ಗುರುಗಳ ಮಾತನ್ನ ಕೇಳಿದ ಸಾಗರ, ಹೌದು ತನಗೆ ಮಕ್ಕಳಿಲ್ಲ. ತಾನು ಕೂಡ ಹೆಣ್ಣು ಮಕ್ಕಳನ್ನ ಪಡೆದು, ಅವರಿಗೆ ಕನ್ಯಾದಾನ ಮಾಡಿ, ಪುಣ್ಯ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಆವಾಗಲೇ ತನ್ನ ಬದುಕು ಪರಿಪೂರ್ಣವಾಗುವುದೆಂದು ಎಣಿಸಿದ. ತಪಸ್ಸನ್ನು ಮಾಡಿ 60 ಸಾವಿರ ಹೆಣ್ಣು ಮಕ್ಕಳನ್ನು ಪಡೆಯಬೇಕು. ಅವರಿಗೆ ವಿದ್ಯೆ ಕಲಿಸಿ, ಒಳ್ಳೆಯ ವರನನ್ನು ಹುಡುಕಿ ಕನ್ಯಾದಾನ ಮಾಡಬೇಕು. ಈ ಬಾರಿ ಮುಂದಿನ ಪೀಳಿಗೆಯವರು ಅತ್ಯುತ್ತಮರಾಗಿರಲು ಏನು ಬೇಕೋ ಅದನ್ನು ಮಾಡಬೇಕು ಅಂತಾ ಬಯಸಿದ. ತಪಸ್ಸಿಗೆ ಕುಳಿತ.
ಸಾಗರ ರಾಜನ ತಪಸ್ಸಿಗೆ ಇಂದ್ರ ಹೆದರಿದ. ಈತನೇನಾದ್ರೂ ತಪಸ್ಸನ್ನಾಚರಿಸಿ, 60 ಸಾವಿರ ಹೆಣ್ಣು ಮಕ್ಕಳನ್ನು ಪಡೆದು, ಕನ್ಯಾದಾನ ಮಾಡಿದರೆ, ಸ್ವರ್ಗ ಲೋಕ ಸಾಗರನ ಪಾಲಾಗುತ್ತದೆ. ಆಗ ನಾನು ಸ್ವರ್ಗವನ್ನು ಬಿಟ್ಟುಕೊಡಬೇಕು. ಇಲ್ಲಾ ಹೀಗಾಗಬಾರದು, ಹೇಗಾದರೂ ಮಾಡಿ ಸಾಗರನ ತಪಸ್ಸನ್ನ ಭಂಗ ಮಾಡಬೇಕೆಂದು ಯೋಚಿಸಿದ. ಸರಸ್ವತಿಯ ಬಳಿ ಹೋಗಿ, ಸಾಗರ ರಾಜನ ನಾಲಿಗೆಯ ಮೇಲೆ ಕುಳಿತು ಸಾಗರ ರಾಜನ ಆಸೆಯನ್ನು ತಿರುಚಿ ಎಂದು ಬೇಡಿದ.
ಇಂದ್ರನ ಕೋರಿಕೆಯಂತೆ ಸರಸ್ವತಿ ಸಾಗರನ ನಾಲಿಗೆಯ ಮೇಲೆ ಕುಳಿತಳು. ಸಾಗರ ತನಗೆ 60 ಸಾವಿರ ಹೆಣ್ಣು ಮಕ್ಕಳನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಹೊತ್ತಿಗೆ. ಹೆಣ್ಣು ಮಕ್ಕಳು ಎಂಬ ಶಬ್ಧ ಹೆಳುವಾಗ, ಅಲ್ಲಿ ಗಂಡು ಮಕ್ಕಳೆಂದು ನುಡಿಯುವಂತೆ ಮಾಡಿದಳು. ದೇವರು ವರ ನೀಡಿದ್ದು, ಸಾಗರನಿಗೆ 60 ಸಾವಿರ ಗಂಡು ಮಕ್ಕಳು ಹುಟ್ಟಿದವು. ಕೊನೆಗೆ ಅವರೆಲ್ಲ ಕಪಿಲ ಮಹರ್ಷಿಯ ಶಾಪಕ್ಕೆ ಗುರಿಯಾಗಿ ಸುಟ್ಟುಹೋದರು.