ಆಪರೇಷನ್ ಸಿಂಧೂರ್ ವಿಶೇಷ : ಭಾರತದ ಮೇಲೆ ಸುಖಾ ಸುಮ್ಮನೇ ಜಗಳಕ್ಕಿಳಿದಿರುವ ಪಾಕಿಸ್ತಾನ ಕಳೆದೆರಡು ವಾರಗಳಿಂದ ಭಾರತಕ್ಕೆ ಗೊಡ್ಡ ಬೆದರಿಕೆ ಹಾಕುತ್ತಲೇ ಇದೆ. ಅದರಲ್ಲೂ ಪರಮಾಣು ದಾಳಿಯ ಬೊಗಳೆಯನ್ನೂ ಬಿಟ್ಟಿತ್ತು. ಆದರೆ ಪ್ರಸ್ತುತ ಎರಡೂ ದೇಶಗಳ ನಡುವೆ ಯುದ್ಧದ ಸನ್ನಿವೇಶ ಉದ್ಭವಿಸಿದೆ. ಭಾರತಕ್ಕೆ ಹೆದರಿಸುವ ನಕಲಿ ಆಟ ಆಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪರಮಾಣು ದಾಳಿಯ ಕುರಿತು ನಿರ್ಧರಿಸಲು ಪ್ರಧಾನಿಯ ಜೊತೆಯಾಗಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದನು. ಆದರೆ ಭಾರತದ ಕೌಂಟರ್ ಅಟ್ಯಾಕ್ಗೆ ಬೆಚ್ಚಿ ಬಿದ್ದಿರುವ ಆತ ಸಭೆಯನ್ನೇ ರದ್ದುಗೊಳಿಸಿದ್ದಾನೆ.
ಪರಮಾಣು ಸಭೆಯೇ ರದ್ದು..
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದ್ದಂತೆ, ಭಾರತ-ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯುತ ಸಂಸ್ಥೆಯಾದ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರ ಎನ್ಸಿಎ ಸಭೆಗೆ ಕರೆದಿದ್ದರು ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದಕ್ಕೆ ಉಲ್ಟಾ ಹೊಡೆದಿರುವ ಖ್ವಾಜಾ ಆಸಿಫ್ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ ಯಾವುದೇ ಸಭೆಯನ್ನು ಕರೆಯಲಾಗಿಲ್ಲ ಎಂದು ಸುಳ್ಳು ಹೇಳಿದ್ದಾನೆ.
ಪರಿಣಾಮ ಜಗತ್ತಿನ ಮೇಲಾಗುತ್ತೆ..!
ಪರಮಾಣು ಆಯ್ಕೆಯು ಟೇಬಲ್ ಮೇಲೆ ಇಲ್ಲ, ಆದರೆ ಒಂದು ವೇಳೆ ಪರಿಸ್ಥಿತಿ ಎದುರಾದರೆ, ಇದನ್ನು ನೋಡುವವರು ಕೂಡ ಪರಿಣಾಮ ಅನುಭವಿಸುತ್ತಾರೆ. ಇದು ಕೇವಲ ನಮ್ಮ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ನಾನು ಜಗತ್ತಿಗೆ ಹೇಳುತ್ತಿದ್ದೇನೆ. ಇದು ಹೆಚ್ಚಿನ ಮತ್ತು ವ್ಯಾಪಕವಾದ ವಿನಾಶಕ್ಕೆ ಕಾರಣವಾಗಬಹುದು, ಭಾರತ ಸೃಷ್ಟಿಸುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ ನಮ್ಮ ಆಯ್ಕೆಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಥಂಡಾ ಹೊಡೆದಿದ್ದಾನೆ. ಪಾಕಿಸ್ತಾನದ ನಾಯಕರು ಭಾರತದೊಂದಿಗಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪರಮಾಣು ಆಯ್ಕೆಯನ್ನು ಒಂದು ರೀತಿಯ ಹತೋಟಿ ಎಂದು ಸಾರ್ವಜನಿಕವಾಗಿ ಭಾವಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಷರೀಫ್ ಇತ್ತೀಚೆಗೆ ರಾಷ್ಟ್ರೀಯ ಅಸೆಂಬ್ಲಿಗೆ ನೀಡಿದ ಭಾಷಣದಲ್ಲಿ ಪಾಕಿಸ್ತಾನದ ಪರಮಾಣು ಸಾಮರ್ಥ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಬೊಗಳೆ ಬಿಟ್ಟಿದ್ದಾನೆ.
ಕಾರ್ಯಾಚರಣೆಗೆ ಯಾವುದೇ ಸಂದರ್ಭದಲ್ಲಿ ಸಿದ್ದ..
ಇನ್ನೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚುತ್ತಿದ್ದಂತೆ, ನಾಗರಿಕ ಪ್ರದೇಶಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪಶ್ಚಿಮ ಗಡಿಯಲ್ಲಿ ಡ್ರೋನ್ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಫೈಟರ್ ಜೆಟ್ಗಳನ್ನು ಬಳಸಿಕೊಂಡು ದಾಳಿ ನಡೆಸುವ ಪಾಕಿಸ್ತಾನದ ಪ್ರಚೋದನಕಾರಿ ಕ್ರಮವನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆಯು ಈಗಾಗಲೇ ಹೇಳಿದೆ. ಪಾಕಿಸ್ತಾನ ತನ್ನ ಸೈನ್ಯವನ್ನು ಭಾರತದ ಗಡಿಗಳತ್ತ ನುಸುಳಿಸುತ್ತಿರುವುದು ಕಂಡುಬಂದಿದೆ, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನು ಸೂಚಿಸುತ್ತದೆ. ಪಾಕಿಸ್ತಾನದ ಯಾವುದೇ ದಾಳಿಗಳಿಗೆ ತಕ್ಕ ಉತ್ತರ ನೀಡಲು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಹೇಳಿದೆ.
ಮದರಸಾ ವಿದ್ಯಾರ್ಥಿಗಳನ್ನ ಸೈನಿಕರನ್ನಾಗಿಸುತ್ತೇವೆ..
ಇನ್ನೂ ಮದರಸಾಗಳು ಅಥವಾ ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ಸಾಲಿನ ರಕ್ಷಣಾ ಪಡೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಮಯ ಬಂದಾಗ, ಅಲ್ಲಿ ಓದುತ್ತಿರುವ ಯುವಕರನ್ನು ಅಗತ್ಯವಿರುವಂತೆ ನೂರಕ್ಕೆ ನೂರರಷ್ಟು ಯುದ್ದಕ್ಕೆ ಬಳಸಿಕೊಳ್ಳಲಾಗುವುದು ಎಂದು ಖ್ವಾಜಾ ಪಾಕ್ನ ಸಂಸತ್ತಿನಲ್ಲಿ ಘೋಷಿಸುವ ಮೂಲಕ ತಮ್ಮಲ್ಲಿನ ಸೈನ್ಯದ ವೈಫಲ್ಯವನ್ನು ಬಟಾ ಬಯಲು ಮಾಡಿದ್ದನು. ಆದರೆ ಭಾರತದ ಪರಿಣಾಮಕಾರಿ ಡ್ರೋನ್, ಮಿಸೈಲ್ಗಳ ದಾಳಿಯ ಹೊಡೆತ ತಿಂದಿರುವ ಪಾಕಿಸ್ತಾನಕ್ಕೆ ಇನ್ನಷ್ಟು ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ದ ಮದರಸಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
ಏನಿದು ಎನ್ಸಿಎ..?
ಇನ್ನೂ ಎನ್ಸಿಎ ಇದು ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಕಾರ್ಯಾಚರಣೆಯ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಮಾತ್ರ ಈ ಸಭೆಯನ್ನು ಕರೆಯಲಾಗುತ್ತದೆ. ಈ ಹಿಂದೆ ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್, ಇರಾನ್ ಯುದ್ಧ ನಡೆಯುವಾಗಲೂ ಪರಮಾಣು ಬಾಂಬ್ ಬಳಸುವ ಬಗ್ಗೆ ಬಹಳಷ್ಟು ಸುದ್ದಿಗಳು ಹಬ್ಬಿದ್ದವು. ಆದರೆ ಯಾರೂ ಅಣು ಬಾಂಬ್ ಪ್ರಯೋಗಿಸುವ ಧೈರ್ಯ, ಸಾಹಸ ಮಾಡಿರಲಿಲ್ಲ. ಒಂದು ವೇಳೆ ಯಾವುದಾದರೂ ದೇಶ ಪರಮಾಣು ಬಾಂಬ್ ಬಳಸಿದರೆ ಆ ದೇಶದ ಜೊತೆ ವಿಶ್ವವೇ ಆರ್ಥಿಕ ಸಂಬಂಧವನ್ನೇ ಕಡಿತ ಮಾಡಿಕೊಳ್ಳುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ಬಳಿಕ ಇಲ್ಲಿಯವರೆಗೆ ಯಾವುದೇ ದೇಶ ಪರಮಾಣು ಅಸ್ತ್ರವನ್ನು ಬಳಸಿಲ್ಲ. ಆದರೆ ಪಾಕಿಸ್ತಾನ ಮೇಲಿಂದ ಮೇಲೆ ಹೇಳುತ್ತಲೇ ಇತ್ತು, ಭಾರತದ ಮೇಲೆ ಪರಮಾಣು ಪ್ರಯೋಗ ಮಾಡುತ್ತೇವೆ ಅಂತ, ಆದರೆ ಇದೀಗ ತಾನು ಮಾಡಿರುವ ಮಣ್ಣು ತಿನ್ನುವ ಕೆಲಸದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬಲಿಷ್ಠ ರಾಷ್ಟ್ರಗಳ ಅಭೂತಪೂರ್ವ ಬೆಂಬಲ ದೊರಕಿರುವುದನ್ನು ನೋಡಿ ಪಾಪಿಗಳಿಗೆ ಪುಕ ಪುಕ ಶುರುವಾಗಿದೆ.