Thursday, June 19, 2025

Latest Posts

ಪಾಕ್‌ ವಿರುದ್ಧ ಯುದ್ಧ ಬೇಡ, ಕೇಂದ್ರದವ್ರು ಟೋಪಿ ಹಾಕಿದ್ದಾರೆ : ಸಿದ್ದರಾಮಯ್ಯ ಭಿನ್ನರಾಗ..!

- Advertisement -

ಮೈಸೂರು : ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಮಾರಣ ಹೋಮ ನಡೆಸಿರುವ ಉಗ್ರರ ವಿರುದ್ಧ ಮುಂದಿನ ಕ್ರಮಗಳನ್ನುಕೈಗೊಳ್ಳಲು ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿತ್ತು.

ದೇಶದ ಬಹುತೇಕ ವಿರೋಧ ಪಕ್ಷಗಳ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ಅಲ್ಲದೆ ಸಭೆಯ ಬಳಿಕ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರು ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲವಿದೆ ಎಂದು ಹೇಳಿದ್ದರು. ಆದರೆ ತಮ್ಮದೇ ಪಕ್ಷದ ಅಧ್ಯಕ್ಷರ ಹೇಳಿಕೆಗೆ ಭಿನ್ನರಾಗ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಯುದ್ಧದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಭದ್ರತೆಯ ವೈಫಲ್ಯದಿಂದಲೇ ಈ ರೀತಿಯ ಘಟನೆ ನಡೆದಿದೆ. ಪಹಲ್ಗಾಮ್‌ ಅದೊಂದು ಪ್ರವಾಸಿಗರ ಸ್ಥಳವಾಗಿದೆ, ಅಲ್ಲಿ ಕೇಂದ್ರ ಸರ್ಕಾರ ಭದ್ರತೆಯನ್ನು ಒದಗಿಸಿರುತ್ತದೆ ಎಂದು ಭಾವಿಸಿಕೊಂಡು ಜನ ಹೋಗಿದ್ದರು. ಆದರೆ ಅಲ್ಲಿ ಸುರಕ್ಷತೆ ನೀಡದೆ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ ಎಂದು ಅವರು ಕಿಡಿಕಾರಿದ್ದಾರೆ.

ಯುದ್ಧದ ಅವಶ್ಯಕತೆ ಇಲ್ಲ..

ಈ ಹಿಂದೆಯೂ ಪುಲ್ವಾಮಾದಲ್ಲಿ ಭೀಕರ ದಾಳಿ ನಡೆದಿತ್ತು, ಆಗಲೂ ಕೇಂದ್ರ ಸರ್ಕಾರದ ಭದ್ರತಾ ಲೋಪವೇ ಆಗಿತ್ತು. ಗುಪ್ತಚರ ಹಾಗೂ ಸೆಕ್ಯೂರಿಟಿ ಫೇಲ್ಯೂರ್ ಆಗಿದೆ. ನಾನು ಶಾಂತಿಯ ಪರವಾಗಿದ್ದೇನೆ. ನಮಗೆ ಪಾಕಿಸ್ತಾನದ ವಿರುದ್ಧ ಯುದ್ಧದ ಅಗತ್ಯತೆ ಇಲ್ಲ. ಬದಲಿಗೆ ಕೇಂದ್ರ ಸರ್ಕಾರ ತನ್ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿ. ಜನರಿಗೆ ಸುರಕ್ಷತೆ ಮುಖ್ಯವಾಗಿದೆ, ಭದ್ರತಾ ವ್ಯವಸ್ಥೆಯನ್ನು ನಂಬಿ ಹೋದ 26 ಜನರ ಜೀವವನ್ನು ಮರಳಿ ತರಲು ಸಾಧ್ಯನಾ.? ಹಾಗಾದರೆ ಕೇಂದ್ರ ಸರ್ಕಾರ ಹೇಳುವುದು ಕೇವಲ ಭಾಷಣಕ್ಕಷ್ಟೇನಾ..? ಈಗ ಏನೇ ಕ್ರಮ ಕೈಗೊಂಡರು ಹೋದ ಜೀವಗಳು ವಾಪಸ್‌ ಬರಲ್ಲ, ಈಗ ಕೇಂದ್ರ ತನ್ನ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ಅಲ್ಲದೆ ಇದರ ಬಗ್ಗೆ ನಾನು ಮೊದಲೇ ಹೇಳಿದ್ದೆ ಅದು ಈಗ ನಿಜವಾಗಿದೆ ಎಂದು ಸಿದ್ದರಾಮಯ್ಯ ಕೇಂದ್ರವನ್ನು ಟೀಕಿಸಿದ್ದಾರೆ.

ಕೇಂದ್ರದ ಸೂಚನೆ ಪಾಲಿಸುತ್ತೇವೆ..!

ದೇಶದಲ್ಲಿ ದಾಳಿ ನಡೆದಿದೆ, ಕೇಂದ್ರ ಸರ್ಕಾರ ಕರೆದ ಮಹತ್ವದ ಸರ್ವಪಕ್ಷಗಳ ಸಭೆಗೆ ಪ್ರಧಾನಿ ಗೈರಾಗಿದ್ದಾರೆ. ಅಲ್ಲದೆ ಇದನ್ನು ಬಿಟ್ಟು ಬೇರೆ ಯಾವುದು ಮುಖ್ಯವಾದ ಸಭೆ ಇದೆ? ಇವರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಿದೆಯಾ..? ಇದನೆಲ್ಲ ಬಿಟ್ಟು ಚುನಾವಣಾ ಪ್ರಚಾರದ ಭಾಷಣವೇ ಮುಖ್ಯವಾಯಯ್ತಾ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ರಾಜ್ಯದಿಂದ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುವ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರದೊಂದಿಗೆ ಸಹಕಾರ ನೀಡುತ್ತೇವೆ. ಅತಿ ಹೆಚ್ಚು ಜನರು ಇರುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ ರಾಜ್ಯದಲ್ಲಿರುವವರ ಬಗ್ಗೆ ಮಾಹಿತಿ ಇಲ್ಲ, ನಾವು ಕೇಂದ್ರದ ಸೂಚನೆಯನ್ನು ಪಾಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಾಹುಲ್‌, ಖರ್ಗೆ ಏನು ಹೇಳಿದ್ದರು..?

ಕೇಂದ್ರ ಸಚಿವ ರಾಜನಾಥ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯ ಬಳಿಕ ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಲ್ಲಾ ರಾಜಕೀಯ ಪಕ್ಷಗಳು ಪಹಲ್ಗಾಮ್‌ ದಾಳಿಯನ್ನು ಒಗ್ಗಟ್ಟಾಗಿ ಖಂಡಿಸಿವೆ. ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡೂ ಪ್ರತಿಪಕ್ಷಗಳು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತವೆ ಎಂದು ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆದಷ್ಟು ಬೇಗ ಶಾಂತಿಯನ್ನು ಪುನಃಸ್ಥಾಪಿಸಲು ನಾವು ಬಯಸುತ್ತೇವೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು. ಸದ್ಯ ಪಾಕಿಗಳ ವಿರುದ್ಧ ಪ್ರತೀಕಾರದ ಕುದಿ ದೇಶಾದ್ಯಂತ ಹೆಚ್ಚಾಗುತ್ತಿದೆ. ಅದರೆ ಪಕ್ಷದ ಹೈಕಮಾಂಡ್‌ ನಾಯಕರು ಮುಕ್ತವಾಗಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದರೂ ಕೂಡ ಆದರೆ ಅದೇ ಪಕ್ಷದಲ್ಲಿರುವ ಸಿದ್ದರಾಮಯ್ಯ ಅವರ ಈ ಹೇಳಿಕೆಯು ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಬಹುದು ಜೊತೆಗೆ ಸಾರ್ವಜನಿಕವಾಗಿಯೂ ವ್ಯಾಪಕ ವಿರೋಧಗಳು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ.

- Advertisement -

Latest Posts

Don't Miss