Friday, June 20, 2025

Latest Posts

Bangladesh: ಭಾರತದ 3 ರಾಜ್ಯ ನಮ್ಮವು ,ವಿವಾದ ಸೃಷ್ಟಿಸಿದ ಬಾಂಗ್ಲಾದೇಶ!

- Advertisement -

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಬಾಂಗ್ಲಾದ ಭಾಗಗಳು ಅಂತ ಹೇಳಿಕೆ ನೀಡುವ ಮೂಲಕ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆಪ್ತ ಮಹ್ಫುಜ್ ಆಲಂ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಮೂರು ರಾಜ್ಯಗಳು ನಮ್ಮವು ಎಂದು ಹೇಳಿಕೆ ನೀಡಿರುವುದರ ಜೊತೆಗೆ ಬಾಂಗ್ಲಾದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ ನೀಡಬೇಕು ಅಂತ ಕರೆ ನೀಡಿದ್ದಾರೆ.

ಇದಕ್ಕೆ ಕಿಡಿಕಾರಿರುವ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಸಾರ್ವಜನಿಕವಾಗಿ ಇಂತಹ ಹೇಳಿಕೆ ಕೊಡುವಾಗ ಎಚ್ಚರ ಇರಲಿ ಅಂದಿದ್ದಾರೆ. 2 ದಿನಗಳಲ್ಲಿ ಬಾಂಗ್ಲಾದೇಶದ 3 ಹಿಂದೂ ದೇವಾಲಯಗಳಲ್ಲಿನ 8 ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಇದರ ಬೆನ್ನಲ್ಲೇ ದಾಳಿಕೋರ ಜಲಾಲುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 

ಮೈಮೆನ್‌ಸಿಂಗ್‌ನ ಹಲುಘಾಟ್ ಉಪಜಿಲ್ಲೆಯಲ್ಲಿ ಡಿ.20 ಮತ್ತು 21 ರಂದು 2 ದೇವಾಲಯಗಳ 3 ವಿಗ್ರಹ ಧ್ವಂಸಗೊಳಿಸಲಾಗಿದೆ. ಡಿ.20ರಂದು ಬೆಳಿಗ್ಗೆ ಹಲುಘಾಟ್‌ನ ಬೋಂಡರ್ ಪಾರಾ ದೇಗುಲದ 2 ವಿಗ್ರಹ ಧ್ವಂಸಮಾಡಿದ್ದಾರೆ. ಡಿ.21 ರಂದು ಮುಂಜಾನೆ ಹಲುಘಾಟ್‌ನ ಬೀಳ್‌ದೊರಾನಲ್ಲಿರುವ ಪೋಲಾಷ್ ಕಂಡ ಕಾಳಿ ದೇವಸ್ಥಾನದಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತರ ಮೇಲೆ ಈ ವರ್ಷದ ಆರಂಭದಿಂದ ಡಿ.8ರ ವರೆಗೆ 2,200ಕ್ಕೂ ಅಧಿಕ ದಾಳಿಗಳು ನಡೆದಿವೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ. ಜತೆಗೆ, ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದೆ.

ಈ ಕುರಿತು ವಿದೇಶಾಂಗ ಇಲಾಖೆಯ ರಾಜ್ಯಸಚಿವ ಕೀರ್ತಿ ವರ್ಧನ್‌ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, ವಿವಿಧ ದೇಶಗಳಲ್ಲಿನ ಹಿಂದೂಗಳ ದಾಳಿ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

‘ಈ ವರ್ಷದ ಅಕ್ಟೋಬರ್‌ ವರೆಗೆ ಪಾಕಿಸ್ತಾನದ ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ಮೇಲೆ 122 ದಾಳಿಗಳಾಗಿವೆ. 2022ರಲ್ಲಿ ದಾಳಿಗಳ ಸಂಖ್ಯೆ ಪಾಕ್‌ನಲ್ಲಿ 241 ಹಾಗೂ ಬಾಂಗ್ಲಾದಲ್ಲಿ 47 ಇತ್ತು. 2023ರಲ್ಲಿ ಪಾಕಿಸ್ತಾನದಲ್ಲಿ 103 ಹಾಗೂ ಬಾಂಗ್ಲಾದಲ್ಲಿ 302 ದಾಳಿಗಳು ವರದಿಯಾಗಿವೆ’ ಎಂದು ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕು ಸಂಘಟನೆಯ ಅಂಕಿಅಂಶಗಳನ್ನಾಧರಿಸಿ ಮಾಹಿತಿ ನೀಡಿದ್ದಾರೆ.ಇದೇ ವೇಳೆ, ಇವೆರಡು ದೇಶಗಳನ್ನು ಹೊರತುಪಡಿಸಿ ಅನ್ಯ ನೆರೆರಾಷ್ಟ್ರಗಳಲ್ಲಿ ಹಿಂದೂ ಹಾಗೂ ಅಲ್ಪಸಂಖ್ಯಾತರ ಮೇಲೆ ಶೂನ್ಯ ದಾಳಿಗಳಾಗಿವೆ ಎಂದಿದ್ದಾರೆ.

ಇದೇ ವೇಳೆ, ಬಾಂಗ್ಲಾ ಸರ್ಕಾರದೆದುರು ಕಳವಳ ವ್ಯಕ್ತಪಡಿಸಿರುವ ಭಾರತ, ಹಿಂದೂ ಹಾಗೂ ಅನ್ಯ ಅಲ್ಪಸಂಖ್ಯಾತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ ಅಂತ ಸಚಿವರು ಹೇಳಿದ್ದಾರೆ.

- Advertisement -

Latest Posts

Don't Miss