ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣದ ಬೆನ್ನು ಹತ್ತಿದ್ದ ಎಸ್ಐಟಿಗೆ ಕೊನೆಗೂ ಕಳೇಭರದ ಕುರುಹುಗಳು ಸಿಕ್ಕಿದೆ. ಬರೋಬ್ಬರಿ 66 ಸಿಬ್ಬಂದಿ ಮತ್ತು ಪೌರಕಾರ್ಮಿಕರು, ಅಗೆಯುವ ಕಾರ್ಯದಲ್ಲಿ ಭಾಗಿಯಾಗಿದ್ರು. ಜುಲೈ 29, 30ರಂದು 1ರಿಂದ 5ನೇ ಪಾಯಿಂಟ್ಗಳಲ್ಲಿ ಅಗೆದರೂ ಏನೂ ಸಿಕ್ಕಿರಲಿಲ್ಲ.
3ನೇ ದಿನ ಪಾಯಿಂಟ್ ನಂಬರ್ 6ರಲ್ಲಿ, ಶೋಧ ಕಾರ್ಯ ಆರಂಭಿಸಲಾಯಿತು. ಕೆಲವು ನಿಮಿಷಗಳ ಕಾಲ ಅಗೆದ ಕಾರ್ಮಿಕರು, ಮೂಳೆಗಳು ಸಿಕ್ಕಿವೆ ಅಂತಾ ಕೂಗಿದ್ರು. ತಕ್ಷಣವೇ ನಿಯಮ ಪ್ರಕಾರವೇ ಸಿಕ್ಕ ಮೂಳೆಗಳನ್ನು, ಎಸ್ಐಟಿ ಟೀಂ ವಶಕ್ಕೆ ಪಡೆದಿದೆ.
ಮೊದಲು 2 ಮೂಳೆಗಳು ಪತ್ತೆಯಾಗಿದ್ವು. ಬಳಿಕ ಹಿಟಾಚಿ ಬಳಸಿ ಮತ್ತಷ್ಟು ಆಳಕ್ಕೆ ಅಗೆದಾಗ, 10 ಮೂಳೆಗಳು ಸಿಕ್ಕಿವೆ. ಮನುಷ್ಯನದ್ದು ಎನ್ನಲಾದ ದೇಹದ ವಿವಿಧ ಭಾಗಗಳ ಒಟ್ಟು 12 ಮೂಳೆಗಳು ಪತ್ತೆಯಾಗಿವೆ. ಜೊತೆಗೆ ಕೆಲವು ಬಟ್ಟೆಗಳ ತುಂಡುಗಳೂ ಸಿಕ್ಕಿವೆ. ಪ್ರಾಥಮಿಕ ವರದಿ ಪ್ರಕಾರ, ಪುರುಷನ ಮೂಳೆಗಳು ಅಂತಾ, ಎಫ್ಎಸ್ಎಲ್ ಅಧಿಕಾರಿಗಳು ಹೇಳಿದ್ದಾರೆ.
ಆದ್ರೆ, ಎಫ್ಎಸ್ಎಲ್ ಅಂತಿಮ ವರದಿ ಬಳಿಕವಷ್ಟೇ, ಮೂಳೆ ಯಾರದ್ದು ಅನ್ನೋದು ಗೊತ್ತಾಗಲಿದೆ. ಈಗಾಗಲೇ ಎಲ್ಲಾ ಮೂಳೆಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳನ್ನು ಸಹಾಯಕ ಆಯುಕ್ತರ ಸಮ್ಮುಖದಲ್ಲೇ ಮಾಡಲಾಗಿದೆ. ಮತ್ತು ಎಲ್ಲವನ್ನೂ ಎಸಿ ಸ್ಟೆಲ್ಲಾ ವರ್ಗೀಸ್, ಲಿಖಿತವಾಗಿ ದಾಖಲಿಸಿಕೊಡಿದ್ದಾರೆ.
6ನೇ ಪಾಯಿಂಟ್ನಲ್ಲಿ ಮೂಳೆಗಳು ಪತ್ತೆಯಾದ ಹಿನ್ನೆಲೆ, ಸ್ಥಳ ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಅಗೆದಿರುವ ಗುಂಡಿಯಲ್ಲಿ ಮಳೆ ನೀರು ನಿಲ್ಲದಂತೆ, ಮೇಲ್ಭಾಗಕ್ಕೆ ಶೀಟ್ ಹಾಕಲಾಗಿದೆ. ಹೊರಗೆ ಕಾಣಿಸದಂತೆ, ಸುತ್ತಲೂ ಗ್ರೀನ್ ಸ್ಕ್ರೀನ್ ಅಳವಡಿಸಲಾಗಿದೆ. ಒಟ್ನಲ್ಲಿ 6ನೇ ಪಾಯಿಂಟ್ನಲ್ಲಿ ಸಿಕ್ಕ ಮೂಳೆಗಳು, ಮುಂದಿನ ಕಾರ್ಯಾಚರಣೆಗೆ ಪುಷ್ಠಿ ಕೊಡುತ್ತಿವೆ.