ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ, ಕಾನೂನು ಮುಂದೆ ಎಲ್ಲರೂ ಒಂದೇ ಎಂಬ ಗಟ್ಟಿ ಸಂದೇಶವನ್ನು ಈ ಮೂಲಕ ಸುಪ್ರೀಂಕೋರ್ಟ್ ರವಾನಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ರಮ್ಯಾ ಕಾರಣರಾಗಿದ್ದರು. ಸಿಟ್ಟಾದ ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕಳಿಸಿದಾಗ ಅವರಿಗೆ ರಮ್ಯಾ ಜೈಲಿನ ರುಚಿ ನೋಡುವಂತೆ ಮಾಡಿದ್ದರು.
ಇದೀಗ ದರ್ಶನ್ಗೆ ಬೇಲ್ ರದ್ದಾದದ್ದೇ ತಡ ಮತ್ತೆ ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಉಳಿದ ಆರೋಪಿಗಳಿಗೆ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದಿದ್ದಾರೆ.
‘ಉಳಿದವರಿಗೆ ನಾನು ಹೇಳ ಬಯಸುವುದು ಏನೆಂದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ಸರಿಯಾದ ಕಾನೂನು ಪ್ರಕ್ರಿಯೆ ಅನುಸರಿಸಿ. ಇದು ದೀರ್ಘ ಮತ್ತು ಕಠಿಣ ಹಾದಿಯಾದರೂ ಸುರಂಗದ ಕೊನೆಯಲ್ಲಿ ಬೆಳಕಿರುವ ಹಾಗೆ ಇದರಲ್ಲೂ ನ್ಯಾಯ ಸಿಕ್ಕೇ ಸಿಗುತ್ತದೆ.
ಯಾವ ಕಾರಣಕ್ಕೂ ಕಾನೂನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮಸಾಕ್ಷಿಗೆ ನಿಷ್ಠರಾಗಿರಿ’ ಎಂದು ಹೇಳಿದ್ದಾರೆ. ಇನ್ನು ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತಂತಿರುವ ದರ್ಶನ್ ಅಭಿಮಾನಿಗಳು ಈ ಭಾರಿ ರಮ್ಯಾ ಅವರ ಸೋಷಿಯಲ್ ಮೀಡಿಯಾದ ಈ ಪೋಸ್ಟ್ಗೆ ಯಾವುದೇ ಕಾಮೆಂಟ್ ಮಾಡಿಲ್ಲ.
ಸುಪ್ರೀಂ ಕೋರ್ಟ್ ದರ್ಶನ್ ಬೇಲ್ ರದ್ದು ಮಾಡಿರುವ ಸುದ್ದಿ ತಿಳಿದು ಗುಂಪು ಗುಂಪಾಗಿ ದರ್ಶನ್ ನಿವಾಸದ ಎದುರು ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ವಿಷಯ ತಿಳಿದು ತುಂಬಾ ನೋವಾಗಿದೆ. ನಮ್ಮ ಡಿ ಬಾಸ್ ಜೈಲಲ್ಲಿದ್ದರೂ ನಾವು ಅವರನ್ನು ಬಿಟ್ಟುಕೊಡಲ್ಲ. ಅವರನ್ನು ನೂರಕ್ಕೆ ನೂರರಷ್ಟು ಬೆಳೆಸುತ್ತೇವೆ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ