ಕಾಂಗ್ರೆಸ್ ನಲ್ಲಿ ಈಗಾಗಲೇ ಮಾಜಿ ಸಚಿವ ಮತ್ತು ಸಿಎಂ ಸಿದ್ದರಾಮಯ್ಯ ಆಪ್ತ ಕೆ ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಇತ್ತ ರಾಜಣ್ಣ ಹೈಕಮಾಂಡ್ ಮನವೊಲಿಸಲು ಸರ್ಕಸ್ ಮಾಡುತ್ತಿದ್ದಾರೆ. ಇದೀಗ ರಾಜಣ್ಣ ಅವರಂತೇ ಶಾಸಕ ಶಿವಲಿಂಗೇಗೌಡರ ವಿರುದ್ದವೂ ಕೂಡ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಪಕ್ಷದ ಹೈಕಮಾಂಡ್ ಗೆ ಆಗ್ರಹ ಮಾಡಿದ್ದಾರೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಏಳು ಕೋಟಿ ರೂಪಾಯಿ ಹಂಚಿಕೆ ಮಾಡಿರುವ ಹೇಳಿಕೆಯ ಆಡಿಯೋ ವೈರಲ್ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್ ಅವರು, ಶಿವಲಿಂಗೇಗೌಡರು ಇಂತಹ ಹೇಳಿಕೆ ಕೊಡುವುದು ತಪ್ಪು. ಒಬ್ಬ ಹಿರಿಯ ಶಾಸಕರೇ ಈ ರೀತಿ ಹೇಳಿಕೆ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಈ ರೀತಿ ಯಾರೂ ಮಾತನಾಡಬಾರದು. ಪಕ್ಷದ ವಿರುದ್ಧವಾಗಿ ಹೇಳಿಕೆ ಕೊಟ್ಟು ಈಗ ರಾಜಣ್ಣ ಅನುಭವಿಸುತ್ತಿದ್ದಾರೆ. ಆಡಿಯೋವನ್ನು ಕೆಪಿಸಿಸಿ ಅಧ್ಯಕ್ಷರು ಪಡೆದು ಶಿವಲಿಂಗೇಗೌಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ರಾಜಣ್ಣ ಅವರನ್ನು ಮಾಜಿ ಸಚಿವ ಶ್ರೀರಾಮುಲು ಬಿಜೆಪಿಗೆ ಬರಲಿ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಣ್ಣ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಅವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸಣ್ಣಪುಟ್ಟ ತಪ್ಪಾಗಿದ್ದರೆ ಅದನ್ನು ಬಗೆಹರಿಸಿ, ಮುಂದೆ ನಮ್ಮ ಜೊತೆಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಬಿಜೆಪಿಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ವಿಚಾರದಲ್ಲಿ ಜಾತಿಗಳನ್ನು ತರುವುದು ಸರಿಯಲ್ಲ, ನಾಗೇಂದ್ರ ಅವರ ವಿರುದ್ಧ ರಾಜೀನಾಮೆ ತಗೊಳ್ಳಿ ಎಂದು ಹೇಳಿದ್ದು ಬಿಜೆಪಿ. ಅವರೇ ಈಗ ಜಾತಿ ಬಗ್ಗೆ ಮಾತನಾಡುವುದು ಎಷ್ಟು ಸರಿ?. ಬಿಜೆಪಿಗರಿಗೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವುದರಲ್ಲಿ ಗೊಂದಲ ಇದೆ. ಅವರದ್ದೇ 108 ಸಮಸ್ಯೆ ಇದೆ. ನಮ್ಮ ವಿಚಾರದ ಬಗ್ಗೆ ಯಾಕೆ ಮಾತನಾಡಬೇಕು, ಅವರ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ತೆಗೆದುಹಾಕಿಕೊಳ್ಳಲಿ. ನಂತರ ನಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಯೋಚನೆ ಮಾಡಲಿ ಎಂದು ತಿರುಗೇಟು ಕೊಟ್ಟರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ