ಬಹಳ ದಿನಗಳಿಂದ ಬೆಂಗಳೂರಿಗರು ಕಾದು ಕುಳಿತಿದ್ದ ಹೆಬ್ಬಾಳ ಮೇಲ್ಸೇತುವೆಗೆ ಇವತ್ತು ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೆಬ್ಬಾಳ ಜಂಕ್ಷನ್ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಈ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದರು.
ವಿಶೇಷವಾಗಿ ಡಿಕೆ ಶಿವಕುಮಾರ್ ಅವರು ತಮ್ಮ ಕಾಲೇಜಿನ ರೋಡ್ ಕಿಂಗ್ ಯೆಜ್ಡಿ ಬೈಕಿನಲ್ಲಿ ಹೆಬ್ಬಾಳ ಫ್ಲೈಓವರ್ ಮೇಲೆ ಸೂಪರ್ ಆಗಿ ರೈಡ್ ಹೋಗಿದ್ದಾರೆ. ಕಳೆದ ಬಾರಿ ಮೇಲ್ಸೇತುವೆ ಪರಿಶೀಲನೆಗೆ ಹೋಗಿದ್ದಾಗ, ಡಿಕೆಶಿ ಅವರು ಡಿಯೋ ಬೈಕ್ವೊಂದರಲ್ಲಿ ಜಾಲಿ ರೈಡ್ ಮಾಡಿದ್ದರು. ಆದರೆ, ಆ ಬೈಕ್ನ ಮೇಲೆ 13500 ನಷ್ಟು ಟ್ರಾಫಿಕ್ ರೂಲ್ಸ್ ಮಾಡಿರುವ ಫೈನ್ ಇತ್ತು. ಇದು ಎಲ್ಲೆಡೆ ಸುದ್ದಿ ಕೂಡ ಆಗಿತ್ತು.
ಈ ಬಾರಿ ಯಾವುದೇ ರಿಸ್ಕ್ ಬೇಡವೆಂಬಂತೆ ಡಿಕೆಶಿ ಅವರು ಅವರ ಹಳೆಯ ಫೇವರೆಟ್ ಯೆಜ್ಡಿ ಬೈಕ್ ಅನ್ನು ತಂದು ಜಾಲಿಯಾಗಿ ರೈಡ್ ಹೋದರು. ನಗು ಮುಖದಲ್ಲಿ ಕಣ್ಣು ಕುಕ್ಕುವ ಹಾಗೆ ಹೆಬ್ಬಾಳ ಫ್ಲೈ ಓವರ ಮೇಲೆ ಡ್ರೈವ್ ಮಾಡಿ ಖುಷಿಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಹಸಿರು ಬಾವುಟ ತೋರಿಸಿ ಡಿಕೆಶಿ ಅವರ ರೈಡ್ಗೆ ಚಾಲನೆ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಡಿಕೆಶಿ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಚ್ಚಿಕೊಂಡು ಸಾಲುಗಳನ್ನು ಬರೆದಿದ್ದಾರೆ.
ಹೆಬ್ಬಾಳ ಜಂಕ್ಷನ್ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸಲು ನಿರ್ಮಿಸಿರುವ ಮೇಲ್ಸೇತುವೆಯನ್ನು ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ಇಂದಿನಿಂದ ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ 700 ಮೀಟರ್ ಉದ್ದದ ಹೆಬ್ಬಾಳ ಫ್ಲೈಓವರ್ ನಿರ್ಮಾಣದಿಂದ ಹೆಬ್ಬಾಳದ ಟ್ರಾಫಿಕ್ ದಟ್ಟಣೆ ಶೇಕಡಾ 30ರಷ್ಟು ನಿವಾರಣೆಯಾಗುವ ನಿರೀಕ್ಷೆ ಇದೆ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ನನ್ನ ಯೆಜ್ಡಿ ರೋಡ್ಕಿಂಗ್ ಬೈಕ್ ಸವಾರಿ ಮಾಡುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕಿದೆ. ಬೆಂಗಳೂರಿನ ನಾಗರಿಕರೇ, ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಬೆಂಗಳೂರು ನಗರಕ್ಕೆ ಹೊಸರೂಪವನ್ನು ನೀಡಲು ನಾವು ಬದ್ಧರಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ