PWD ಇಲಾಖೆಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..

ಹುಬ್ಬಳ್ಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ, ಖಾಲಿ ಕುರ್ಚಿಗಳ ದರ್ಬಾರ್‌ ಹೆಚ್ಚಾಗಿದೆ. ಬೆಳಗ್ಗೆ ಇರಲಿ… ಮಧ್ಯಾಹ್ನವೇ ಆಗ್ಲಿ.. ಕಚೇರಿ ಅವಧಿ ಮುಗಿಯುವ ಸಮಯಕ್ಕೆ ಹೋದರೂ, ಅಧಿಕಾರಿಗಳು ಇರೋದೇ ಇಲ್ಲ. ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚೇಂಬರ್, ಆಡಳಿತ ಶಾಖೆ, ಇಂಜಿನಿಯರ್ ವಿಭಾಗ, ಮೀಟಿಂಗ್ ಹಾಲ್ ಎಲ್ಲಾ ವಿಭಾಗದಲ್ಲೂ, ಖಾಲಿ ಕುರ್ಚಿಗಳ ದರ್ಶನವಾಗುತ್ತಿದೆ.

ಈ ಬಗ್ಗೆ ಲೋಕೋಪಯೋಗಿ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಸುಧಾಕರ್ ಕಟ್ಟಿಮನಿ ಅವರನ್ನ ಕೇಳಿದ್ರೆ, ಧಾರವಾಡದಲ್ಲಿ ಮೀಟಿಂಗ್ ಇದೆ. ಎಲ್ಲಾ ಸಹಾಯಕ ಇಂಜಿನಿಯರ್ಸ್ ಅಲ್ಲೇ ಇದ್ದೇವೆ. ಕೋರ್ಟ್, ಆರ್.ಟಿ.ಐ ಮೇಲ್ಮನವಿ ಇರೋದಿದ್ರಿಂದ, ಆಡಳಿತ ಶಾಖೆ ಅಧಿಕಾರಿಗಳು ಇಲ್ಲ ಅಂತಾ ಸಮಜಾಯಿಷಿ ಕೊಡ್ತಾರೆ.

ಆದ್ರೆ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೊಠಡಿಯಲ್ಲಿರುವ ದಿನಚರಿ ನಾಮಫಲಕ ಕೂಡ ಖಾಲಿ ಖಾಲಿ‌ ಇದೆ. ಕಚೇರಿ ಹುಡುಕಿದ್ರೂ ಬಯೋಮೆಟ್ರಿಕ್ ಇಲ್ವೇ ಇಲ್ಲ. ಕಂಪ್ಯೂಟರ್ ಆಪರೇಟರ್, ಜವಾನ, ಸ್ವೀಪರ್ ಮಾತ್ರ ಕಚೇರಿ ಬಾಗಿಲು ಓಪನ್‌ ಮಾಡಿಕೊಂಡು ಕೂತಿರ್ತಾರೆ.

ಸ್ಮಾರ್ಟ್ ಸಿಟಿ ಖ್ಯಾತಿ ಹೊತ್ತ ಹುಬ್ಬಳ್ಳಿಯಲ್ಲಿ, ಲೋಕೋಪಯೋಗಿ ಉಪ ವಿಭಾಗದ ಕಚೇರಿಯಲ್ಲಿ, ಆಡಳಿತ ನಿರ್ವಹಣೆ, ಕಾಗದ ಪತ್ರ ವಿಚಾರಣೆಗಾದರೂ ಒಬ್ಬ ಅಧಿಕಾರಿ ಇರಲೇಬೇಕು. ಆದ್ರೆ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಕೈಗೆ ಸಿಗ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಠಿಣ ಕ್ರಮಕ್ಕೆ ಜನರು ಆಗ್ರಹಿಸುತ್ತಿದ್ದಾರೆ.

About The Author