ದಲಿತ ಮಹಿಳೆಗೂ ಉದ್ಘಾಟನೆ ಹಕ್ಕಿದೆ..

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಒಂದಿಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿ ಇರ್ತಾರೆ. ಸದ್ಯ, ಯತ್ನಾಳ್‌ ವಿರುದ್ಧ 72ನೇ ಎಫ್‌ಐಆರ್‌ ದಾಖಲಾಗಿದ್ದು, ದಲಿತ ಮಹಿಳೆಗೆ ಅವಮಾನ ಆರೋಪ ಎದುರಿಸುತ್ತಿದ್ದಾರೆ. ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆಂದು, ಕೊಪ್ಪಳ ನಗರದ ದಲಿತ ಸಂಘಟನೆಯ ಯುವ ಮುಖಂಡ, ಮಲ್ಲಿಕಾರ್ಜುನ್‌ ಪೂಜಾರ ದೂರು ದಾಖಲಿಸಿದ್ದಾರೆ. ಯತ್ನಾಳ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ಕೊಪ್ಪಳ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಸೆಪ್ಟಂಬರ್‌ 15ರಂದು ಮಾಧ್ಯಮಗಳ ಎದುರು, ದಸರಾ ಉದ್ಘಾಟಕರ ವಿಚಾರವಾಗಿ ಯತ್ನಾಳ್‌ ಮಾತನಾಡ್ತಿದ್ರು. ಈ ವೇಳೆ ದಲಿತ ಮಹಿಳೆಯರಿಗೆ ಅಗೌರವ ರೀತಿಯಲ್ಲಿ ಮಾತನಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಲಿತ ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದು, ದಲಿತ ಸಮುದಾಯಕ್ಕೆ ನೋವಾಗಿದೆ. ವಿಡಿಯೋ ಆಧಾರದಲ್ಲಿ ಯತ್ನಾಳ್ ವಿರುದ್ಧ SC/ST ಜಾತಿ‌ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಯತ್ನಾಳ್ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ, ಕೋಮು ಸಂಘರ್ಷ ಸೃಷ್ಟಿಸುವಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಿ ಅಂತಾ, ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಮೇಲಿನ ಎಫ್‌ಐಆರ್‌ ವಿಚಾರಕ್ಕೆ ಯತ್ನಾಳ್‌, ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರು, ತುಮಕೂರು ಸೇರಿದಂತೆ ರಾಜ್ಯದಾದ್ಯಂತ ಹಿಂದೂ ಕಾರ್ಯಕರ್ತರು, ಜಾತಿ-ಮತ ನೋಡದೆ ನನ್ನೊಂದಿಗೆ ದೃಢವಾಗಿ ನಿಂತಿರುವುದನ್ನು ಸಹಿಸದ, ಕೆಲವು ಅಡ್ಜಸ್ಟ್ಮೆಂಟ್ ನಾಯಕರು, ತಮ್ಮ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ, ನಾನು ದಲಿತರ ವಿರುದ್ಧ ಹೇಳಿಕೆ ನೀಡಿದ್ದೇನೆ ಎಂಬ ಸುಳ್ಳು ಪ್ರಚಾರಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಆದರೆ ಜನತೆ ಅವರ ಸುಳ್ಳಿಗೆ ತಕ್ಷಣವೇ ಚೀಮಾರಿ ಹಾಕಿದಾಗ, ಹತ್ತು ಬಾರಿ ಸುಳ್ಳನ್ನು ಹೇಳಿ, ಸತ್ಯ ಮಾಡುವ ನಿಟ್ಟಿನಲ್ಲಿ ನನ್ನ ವಿರುದ್ಧ ದೂರನ್ನು ದಾಖಲಿಸಿದ್ದಾರೆ, ಎಂಬುದು ನನ್ನ ಗಮನಕ್ಕೆ ಬಂದಿದೆ.

 

ನಾನು ಸ್ಪಷ್ಟವಾಗಿ ಹೇಳಿದ್ದು – ಸಾಮಾನ್ಯ ದಲಿತ ಮಹಿಳೆಯರಿಗೂ ದಸರಾ ಉದ್ಘಾಟನೆ ಮಾಡುವ ಹಕ್ಕು ಇದೆ, ಆದರೆ ಭಾನು ಮುಸ್ತಾಕ್ ಅವರಿಗೆ ಆ ಹಕ್ಕು ಇಲ್ಲ. ಕೆಲವು ಅತೃಪ್ತ ಆತ್ಮಗಳು ನನ್ನನ್ನು ಕುಗ್ಗಿಸಲು ಕನಸು ಕಾಣುತ್ತಿರುವುದರಿಂದ ಇಂತಹ ಕುಯುಕ್ತಿಗಳಿಗೆ ಮೊರೆ ಹೋಗಿದ್ದಾರೆ. ಆದರೆ ಅವರಿಗೆ ಸರಿಯಾದ ಉತ್ತರವನ್ನು ರಾಜ್ಯದ ಜನತೆಯೇ ನೀಡಲಿದ್ದಾರೆಂಬುದು ಸತ್ಯ. ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್‌ ಪೋಸ್ಟ್‌ ಮಾಡಿದ್ದಾರೆ.

About The Author