ದರ್ಶನ್ ಜೈಲಿಗೆ ಹೋದ ನಂತರ ಪತ್ನಿ ವಿಜಯಲಕ್ಷ್ಮಿ ಮೌನ ತಾಳಿದ್ದಾರೆ, ಪೊಲೀಸರ ಕರೆಗಳಿಗೆ ಸ್ಪಂದಿಸುತ್ತಿಲ್ಲ. ಅಶ್ಲೀಲ ಸಂದೇಶ ಕಳಿಸುವ ಪ್ರಕರಣ ಹಾಗೂ ಮನೆ ಕಳ್ಳತನ ಪ್ರಕರಣದಲ್ಲಿ ವಿಜಯಲಕ್ಷ್ಮಿಯ ಹೇಳಿಕೆ ಅಗತ್ಯವಿರುವುದರಿಂದ, ಈ ಸಂಬಂಧ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ಎರಡು ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗುವಲ್ಲಿ ವಿಜಯಲಕ್ಷ್ಮಿ ಆಸಕ್ತಿ ತೋರಿಸಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಚೆನ್ನಮ್ಮನಕೆರೆ ಪೊಲೀಸ್ ಠಾಣೆ ಈವರೆಗೆ ಅಶ್ಲೀಲ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿಗೆ ಮೂರು ಬಾರಿ ನೋಟಿಸ್ ನೀಡಿದೆ. ಕೊನೆಯದಾಗಿ, ನೀವು ಎಲ್ಲಿದ್ದೀರೋ ಅಲ್ಲಿಯೇ ಬಂದು ಹೇಳಿಕೆ ದಾಖಲಿಸುತ್ತೇವೆ ಎಂದರೂ ವಿಜಯಲಕ್ಷ್ಮಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ, ಪೊಲೀಸರು ಸಿ ರಿಪೋರ್ಟ್ ಸಲ್ಲಿಸುವ ಬಗ್ಗೆ ಯೋಚನೆ ನಡೆಸುತ್ತಿದ್ದಾರೆ.
ಮನೆ ಕಳ್ಳತನ ಪ್ರಕರಣದಲ್ಲಿಯೂ ವಿಜಯಲಕ್ಷ್ಮಿ ಹೆಚ್ಚು ಬಾಯ್ಬಿಡದೆ, ಕೇವಲ ತಪ್ಪು ನಡೆದಿದೆ, ತನಿಖೆ ನಡೆಸಿ ಎಂಬಷ್ಟೇ ಹೇಳಿದ್ದಾರೆ. ನನಗೆ ಕೆಲಸವಿದೆ, ಮೈಸೂರಿನಲ್ಲಿ ಇರುತ್ತೇನೆ. ನೀವು ನಿಮ್ಮ ಕೆಲಸ ನೋಡಿ ಎಂದು ಹೇಳಿ, ಪೊಲೀಸರ ಸಂಪರ್ಕವನ್ನು ನಿರಾಕರಿಸಿದ್ದಾರೆ. ಈ ಸಂದರ್ಭ ವಿಜಯಲಕ್ಷ್ಮಿಯ ಮ್ಯಾನೇಜರ್ ನಾಗರಾಜು ಮಾತ್ರ ಹೇಳಿಕೆ ನೀಡಿದ್ದು, ಪ್ರಗತಿ ಮುಂದುವರಿಯಬೇಕಾದರೆ ಮತ್ತಷ್ಟು ಸಾಕ್ಷ್ಯಸಂಗ್ರಹ ಮತ್ತು ಮುಖ್ಯ ವ್ಯಕ್ತಿಗಳ ಹೇಳಿಕೆ ಅಗತ್ಯವಾಗಿದೆ. ವಿಜಯಲಕ್ಷ್ಮಿಯ ಕಡೆಯಿಂದ ಯಾವುದೇ ಸ್ಪಂದನೆ ಇಲ್ಲದ ಕಾರಣ, ಪೊಲೀಸರು ತನಿಖೆಯಲ್ಲಿ ಮುಂದುವರಿಸಲು ಸಂಕಟಕ್ಕೀಡಾಗಿದ್ದಾರೆ.
ಸದ್ಯ ಅವರು ಬೆಂಗಳೂರಿಗೆ ಬಾಯ್ ಹೇಳಿ ಮೈಸೂರಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ದರ್ಶನ್ ಅವರ ವ್ಯಕ್ತಿಗತ ವಿಷಯಗಳನ್ನು ನೋಡಿಕೊಳ್ಳುತ್ತಿದ್ದರೂ, ಮಗನ ಶಾಲಾ ವಿಚಾರಕ್ಕಾಗಿ ಮಾತ್ರ ಬೆಂಗಳೂರಿಗೆ ಬರುತ್ತಿರುವ ಮಾಹಿತಿ ಲಭ್ಯವಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ