ಹಾಸನದ ಹಿಮ್ಸ್ ಆಸ್ಪತ್ರೆ ವೈದ್ಯರ ಯಡವಟ್ಟಿಗೆ, ಮಹಿಳೆ ಹಾಸಿಗೆ ಹಿಡಿಯುವಂತೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ನಿವಾಸಿ ಜ್ಯೋತಿ, ಎರಡೂವರೆ ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ರು. ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ರಾಡ್ ಅಳವಡಿಸಲಾಗಿತ್ತು.
ಇತ್ತೀಚೆಗೆ ರಾಡ್ ಅಳವಡಿಸಿದ್ದ ಕಾಲಿನಲ್ಲಿ ನೋವು, ನರದ ಕಾಯಿಲೆಗಳು ಕಾಣಿಸಿಕೊಂಡಿದೆ. ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾಕ್ಟರ್ ಸಂತೋಷ್ ಬಳಿ ತೋರಿಸಿದ್ದರು. ವೈದ್ಯ ಸಂತೋಷ್ ರಾಡ್ ತೆಗೆಸುವಂತೆ ಸೂಚಿಸಿದ್ರು. ಸೆಪ್ಟೆಂಬರ್ 20ರಂದು ಹಾಸನದ ಹಿಮ್ಸ್ ಆಸ್ಪತ್ರೆಗೆ ಜ್ಯೋತಿ ದಾಖಲಾಗಿದ್ದರು.
ಸೆಪ್ಟೆಂಬರ್22ರಂದು ಶಸ್ತ್ರಚಿಕಿತ್ಸೆ ವೇಳೆ ಎಡಗಾಲು ಬದಲು ಬಲಗಾಲು ಕೊಯ್ದು, ಡಾಕ್ಟರ್ ಸಂತೋಷ್ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಎಡಗಾಲನ್ನೂ ಕೊಯ್ದು, ಅಳವಡಿಸಿದ್ದ ರಾಡ್ ತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಲ್ಲಿ ಎದ್ದು ಓಡಾಡಲು ಸಾಧ್ಯವಾಗದೇ, ಎರಡು ಕಾಲಿಗೂ ಬ್ಯಾಂಡೇಜ್ ಹಾಕಿಸಿಕೊಂಡು ಜ್ಯೋತಿ ಹಾಸಿಗೆ ಹಿಡಿದಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೋತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.