ಮಹೇಶ್ ಶೆಟ್ಟಿ ತಿಮರೋಡಿಗೆ ಎರೆಡೆರೆಡು ಸಂಕಷ್ಟ ಬಂದೊದಗಿದೆ. ಒಂದೆಡೆ ದಕ್ಷಿಣ ಕನ್ನಡದಿಂದ ಗಡಿಪಾರು ನೋಟಿಸ್ ನೀಡಲಾಗಿದೆ. ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಕಾನೂನು ಪ್ರಕಾರ ಮೂರು ನೋಟಿಸ್ ಜಾರಿಯಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು ವಿಚಾರಣೆಗೆ ಹಾಜರಾಗುವ ಅಂತಿಮ ಅವಕಾಶ ದೊರೆತಿದೆ. ಪೊಲೀಸರು ನೀಡಿದ್ದ ಮೂರನೇ ನೋಟಿಸ್ ಪ್ರಕಾರ ಸೆಪ್ಟೆಂಬರ್ 29ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಇದಕ್ಕೂ ಮುನ್ನ ಸೆಪ್ಟೆಂಬರ್ 21 ಮತ್ತು 25ರಂದು ನೀಡಿದ್ದ ನೋಟಿಸ್ಗಳಿಗೆ ತಿಮರೋಡಿ ಗೈರಾಗಿದ್ದರು. ಈಗ ಮೂರನೇ ಬಾರಿ ವಿಚಾರಣೆಗೆ ಗೈರಾಗುವ ಸಾಧ್ಯತೆ ಹೆಚ್ಚಿದೆ. ಕಾನೂನು ಪ್ರಕಾರ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಾಗಿದೆ.
ತಿಮರೋಡಿ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ದಕ್ಷಿಣ ಕನ್ನಡ ಸೆಷನ್ಸ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಮಂಜೂರು ಆಗದಿದ್ದಲ್ಲಿ ಬಂಧನ ಸಾಧ್ಯತೆ ಇದೆ.
ಧರ್ಮಸ್ಥಳ ಅನಧಿಕೃತ ಶವ ಹೂತ ಪ್ರಕರಣಗಳ ತನಿಖೆಯ ಭಾಗವಾಗಿ, ಎಸ್ಐಟಿ ಇಂದು ನಾಲ್ವರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರನ್ನು ವಿಚಾರಣೆಗೆ ಹಾಜರುಗೊಳಿಸಿತು. ಮಾಜಿ ಅಧ್ಯಕ್ಷರಾದ ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ ಹಾಗೂ ಚಂದನ್ ಕಾಮತ್ ವಿಚಾರಣೆಗೆ ಹಾಜರಾಗಿದ್ದಾರೆ. UDR ಪ್ರಕರಣಗಳಲ್ಲಿ ಶವ ಹೂತಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಇವರನ್ನು ಕರೆಸಲಾಗಿದ್ದು, ಎಸ್ಐಟಿ ತನಿಖೆ ಮುಂದುವರಿಸುತ್ತಿದೆ.
ವರದಿ : ಲಾವಣ್ಯ ಅನಿಗೋಳ