ಪ್ರೀತಿ ಎಂಬುದು ಹೃದಯದ ವಿಷಯ, ಆದರೆ ಮನೆಯವರಿಗೆ ಅದು ಗೊತ್ತಾಗೊದಿಲ್ಲಾ. ಪ್ರೀತಿಸಿದವರು ಕೂಡ ಮನೆಯವರಿಗೆ ಹೇಳದೆ ಮದುವೆಯಾಗ್ತಾರೆ. ಈಗ ನಾವು ಹೇಳೋಕೆ ಹೊರಟಿರುವ ಸುದ್ದಿ ಕೇವಲ ಒಂದು ಮಗಳ ಪ್ರೇಮ ಪ್ರಸ್ತಾಪವಲ್ಲ. ಇದು ಒಂದು ತಂದೆಯ ಭಾವನಾತ್ಮಕ ಭಾವ. ದೇಹ-ಮನಸ್ಸಿನ ತೀವ್ರ ಸಂಘರ್ಷ, ಹೃದಯವಿದ್ರಾವಕ ನಿರ್ಧಾರ.
ಪ್ರೀತಿಸಿದ ಯುವಕನೊಂದಿಗೆ ಮಗಳು ಓಡಿಹೋಗಿದ್ದ ಹಿನ್ನೆಲೆಯಲ್ಲಿ ಮನನೊಂದ ತಂದೆ ಊರಿಗೆ ತಿಥಿ ಊಟ ಹಮ್ಮಿಕೊಳ್ಳುವ ಮೂಲಕ ತಮ್ಮ ಮಗಳ ಸತ್ತಿದ್ದಾಳೆ ಎಂದು ಘೋಷಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಶಿವಗೌಡ ಪಾಟೀಲ್ ಎಂಬುವವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದು, ಅವರ ಕೊನೆಯ ಮಗಳು ಅದೇ ನಾಗರಾಳ ಗ್ರಾಮದ ಯುವಕನೊಂದಿಗೆ ಪ್ರೀತಿಸಿ ಪರಾರಿಯಾಗಿದ್ದಾಳೆ. ಈ ಕುರಿತಂತೆ ಪ್ರಾರಂಭದಲ್ಲಿ ಶಿವಗೌಡ ಅವರು ಮಗಳು ಕಾಣೆಯಾಗಿದ್ದಾರೆಂದು ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಮೇಲೆ ತನಿಖೆಯ ವೇಳೆ ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಂದೆ ಶಿವಗೌಡ ಪಾಟೀಲ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಈ ಘಟನೆಯಿಂದ ನೊಂದ ತಂದೆ ‘ನನ್ನ ಮಗಳು ನಮ್ಮ ಪಾಲಿಗೆ ಸತ್ತಳು’ ಎಂದು ನಿರ್ಧರಿಸಿ, ಕುಟುಂಬಸ್ಥರು, ಬಂಧು-ಬಳಗ ಹಾಗೂ ಗ್ರಾಮಸ್ಥರನ್ನು ಕರೆಯಿಸಿ ತಿಥಿ ಊಟ ಹಮ್ಮಿಕೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ