ಜಯಭೇರಿ ಭಾರಿಸಿದ ಕಾಂಗ್ರೆಸ್ : ಹಿಡಿತ ಕಳೆದುಕೊಂಡ ಜೆಡಿಎಸ್!

ಜೆಡಿಎಸ್‌ ಹಿಡಿತದಲ್ಲಿದ್ದ ಶ್ರೀರಂಗಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಖೆಗೆ ಸರಿದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂ. ನಂದೀಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು, ಇದರೊಂದಿಗೆ ಸಂಘದ ರಾಜಕೀಯ ಸಮೀಕರಣದಲ್ಲೂ ದೊಡ್ಡ ಬದಲಾವಣೆ ಕಂಡುಬಂದಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ, ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ ಹಾಗೂ ಸದಸ್ಯರಾದ ಎಂ. ನಂದೀಶ್, ನಾಗರಾಜು ಮತ್ತು ಕಾಂತಾಮಣಿ ಅವರು ಕಾಂಗ್ರೆಸ್ ಪರ ಒಲವು ತೋರಿದರು. ಇದರ ಪರಿಣಾಮವಾಗಿ ಟಿಎಪಿಸಿಎಂಎಸ್‌ನಲ್ಲಿ ಕಾಂಗ್ರೆಸ್ ಬಲ ಎಂಟಕ್ಕೆ ಏರಿಕೆಯಾದರೆ, ಜೆಡಿಎಸ್ ಬಲ ನಾಲ್ಕಕ್ಕೆ ಕುಸಿಯಿತು. ಅಧ್ಯಕ್ಷ ಸ್ಥಾನಕ್ಕೆ ಎಂ. ನಂದೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಎಲ್. ರವಿ ಘೋಷಿಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಸಂಘದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ಹೊಸ ಅಧ್ಯಕ್ಷರ ಆಯ್ಕೆಯ ನಂತರ, ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಎಂ. ನಂದೀಶ್ ಅವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮನ್‌ಮುಲ್‌ ಅಧ್ಯಕ್ಷ ಬಿ. ಬೋರೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಸ್. ಚಂದ್ರಶೇಖರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರು ಬಿ.ಎಸ್. ಚಂದ್ರಶೇಖರ್ ಮತ್ತು ರಾಮಚಂದ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪುರಸಭೆ ಸದಸ್ಯರಾದ ಎಂ.ಎಲ್. ದಿನೇಶ್, ದಯಾನಂದ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಗೌರವಾಧ್ಯಕ್ಷ ಎಂ. ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ರಜಿನಿ ಹಾಗೂ ಉಪಾಧ್ಯಕ್ಷ ರವಿಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭಾಶಯ ಕೋರಿದರು. ಈ ಚುನಾವಣೆ ಫಲಿತಾಂಶದಿಂದ ಟಿಎಪಿಸಿಎಂಎಸ್‌ನಲ್ಲಿ ಕಾಂಗ್ರೆಸ್ ತನ್ನ ಪಾದಾರ್ಪಣೆ ಬಲಪಡಿಸಿಕೊಂಡಂತಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author