ಬಿಗ್ಬಾಸ್ 12ನೇ ಸೀಸನ್ನಲ್ಲಿ ಸ್ಪರ್ಧಿಗಳ ನಡುವೆ ಗೆಳೆತನಕ್ಕಿಂತಲೂ ಜಾಸ್ತಿ ಜಗಳ-ಮನಸ್ತಾಪಗಳು ಹೆಚ್ಚಾಗುತ್ತಿವೆ. ಈ 3 ವಾರಗಳಲ್ಲಿ ಅಶ್ವಿನಿ ಗೌಡ, ಬಿಗ್ಬಾಸ್ ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರಿದ್ದರು. ಆದರೆ ಕಳೆದ ವಾರ ರಕ್ಷಿತ ಶೆಟ್ಟಿ ಕುರಿತಾಗಿ ಅಶ್ವಿನಿ ಮತ್ತು ಜಾನ್ವಿ ನಡೆದುಕೊಂಡ ರೀತಿ, ಕೊಟ್ಟ ಹಿಂಸೆಗೆ, ಮನೆಯವರಿಂದಲೇ ವಿರೋಧ ವ್ಯಕ್ತವಾಗಿದೆ.
ಅದೇ ವಿಚಾರ ಅಶ್ವಿನಿ ಗೌಡಗೆ ಮುಳುವಾಗಿದೆ. ರಕ್ಷಿತಾ ಮೇಲೆ ಜಗಳ ಮಾಡಿದ ಬಳಿಕ ಬೇರೊಬ್ಬ ಸ್ಪರ್ಧಿಯೊಟ್ಟಿಗೆ ಮಾತನಾಡುತ್ತಾ, ರಕ್ಷಿತಾ ಬಗ್ಗೆ S ಪದವೊಂದನ್ನು ಬಳಕೆ ಮಾಡಿದ್ದರು. ಇದೀಗ ಆ ಕುರಿತಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೈಕೋರ್ಟ್ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಹೈಕೋರ್ಟ್ ವಕೀಲ ಪ್ರಶಾಂತ್ ಮೆಹ್ತಾಲ್ ಎಂಬುವರು, ಅಶ್ವಿನಿ ಗೌಡ ಹಾಗೂ ಬಿಗ್ಬಾಸ್ಗೆ ಸಂಬಂಧಿಸಿದ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ರಕ್ಷಿತಾರ ಉಡುಗೆ, ಆಕೆ ಇರುವ ರೀತಿ ಇದನ್ನೆಲ್ಲಾ ಉಲ್ಲೇಖಿಸಿ, ಶಿ ಈಸ್ ಎ ಎಸ್ ಎಂದು ಅಶ್ವಿನಿ ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಸಹ ಅಶ್ವಿನಿ ಅವರ ಪದ ಬಳಕೆಯನ್ನು ಖಂಡಿಸಿದ್ದರು. ಅಶ್ವಿನಿ ಯಾವ ಅರ್ಥದಲ್ಲಿ ‘ಎಸ್’ ಎಂದಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘ಎಸ್’ ಎಂಬುದನ್ನು ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡಲಾಗುತ್ತಿದೆ.
ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಗರಂ ಆದ ಬಳಿಕ ಅಲ್ಲೇ ಅಶ್ವಿನಿ ಕ್ಷಮೆ ಕೇಳಿದ್ರು. ಆದ್ರೀಗ ಆ ಘಟನೆ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕರವೇ ಸಂಘಟನೆಯ ಸಕ್ರಿಯ ಸದಸ್ಯೆ ಆಗಿರುವ ಅಶ್ವಿನಿ ಗೌಡ ಮೇಲೆ ಅವರೇ ಹೇಳಿಕೊಂಡಿರುವಂತೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಈಗ ಮತ್ತೊಂದು ಕೇಸ್ ದಾಖಲಾಗಿದೆ.