ಕರೂರು ಕಾಲ್ತುಳಿತ ಪ್ರಕರಣ ನಡೆದ 1 ತಿಂಗಳ ಬಳಿಕ ನಟ, ರಾಜಕಾರಣಿ ದಳಪತಿ ವಿಜಯ್, ಸಂತ್ರಸ್ತ ಕುಟುಂಬಗಳನ್ನು ಇಂದು ಭೇಟಿ ಮಾಡಿದ್ದಾರೆ. ಮಹಾಬಲಿಪುರಂ ಬಳಿಯ ರೆಸಾರ್ಟ್ ಸಮೀಪ ಮೃತರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.
ಕರೂರು ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಸಾಂತ್ವನ ಹೇಳಲು ರೆಸಾರ್ಟ್ನಲ್ಲಿ ಸಭೆ ನಿಗದಿಪಡಿಸಲಾಗಿದೆ. 37 ಸಂತ್ರಸ್ತ ಕುಟುಂಬ ಸದಸ್ಯರನ್ನು ನಿಗದಿಯಾಗಿರುವ ಸ್ಥಳಕ್ಕೆ, ಪಕ್ಷದಿಂದ ವಾಹನದಲ್ಲೇ ಕರೆದುಕೊಂಡು ಹೋಗಲಾಗಿದೆ.
ಸಂತ್ರಸ್ತ ಕುಟುಂಬಗಳಿಗಾಗಿ ರೆಸಾರ್ಟ್ನಲ್ಲಿ 50 ರೂಮ್ಗಳನ್ನು ಬುಕ್ ಮಾಡಲಾಗಿದೆ. ವಿಜಯ್ ಅವರು ಪ್ರತ್ಯೇಕವಾಗಿ ಎಲ್ಲಾ ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು, ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಗಳು ತಿಳಿಸಿವೆ.
ಭೇಟಿ ವೇಳೆ ಸಂತ್ರಸ್ತ ಕುಟುಂಬದಲ್ಲಿನ ವಿದ್ಯಾರ್ಥಿಗಳಿಗೆ, ಶಿಕ್ಷಣ ಮತ್ತು ಹಣಕಾಸಿನ ಬೆಂಬಲ ನೀಡುವ ಭರವಸೆಯನ್ನು ನೀಡಿದ್ದಾರೆ. ಕರೂರಿನಿಂದ 400 ಕಿಲೋ ಮೀಟರ್ ದೂರು ರೆಸಾರ್ಟ್ ಇದ್ದು, ಸಭೆ ಬಳಿಕ ಮತ್ತೆ ಕರೂರ್ಗೆ ಎಲ್ಲರನ್ನೂ ಕರೆದುಕೊಂಡು ಬರಲಾಗಿದೆ.
ವಿಜಯ್ ನಡೆಗೆ, ಡಿಎಂಕೆ ಕಿಡಿಕಾರಿದೆ. ಟಿವಿಕೆ ಮುಖ್ಯಸ್ಥರಿಗೆ ಸಂತ್ರಸ್ತ ಕುಟುಂಬಸ್ಥರನ್ನು ಅವರ ಮನೆಯಲ್ಲಿ ಭೇಟಿಯಾಗಿ, ಸಾಂತ್ವನ ಹೇಳಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲ. ಈ ಮೂಲಕ ಮನೆಯಿಂದಲೇ ರಾಜಕೀಯ ಮಾಡುವ ಉದ್ದೇಶ ಹೊಂದಿದ್ದಾರೆ. ವಿಜಯ್ ಜನರ ಬಳಿ ಹೋಗಬೇಕು ಎಂಬ ಯಾವ ಉದ್ದೇಶವೂ ಇಲ್ಲ ಎಂದು ವಾಗ್ದಾಳಿ ಟೀಕಿಸಿದ್ದಾರೆ.
ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಟಿವಿಕೆ ಪಕ್ಷ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ, ಕಾಲ್ತುಳಿತ ಸಂಭವಿಸಿ 41 ಜನ ಸಾವನ್ನಪ್ಪಿದ್ರು. 60 ಜನರು ಗಾಯಗೊಂಡಿದ್ದರು. ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದ ನಟ ವಿಜಯ್, ಮೃತರ ಕುಟುಂಬಸ್ಥರಿಗೆ ತಲಾ 20 ಲಕ್ಷ ರೂಪಾಯಿ, ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ರು. ಮತ್ತು ತಮಿಳುನಾಡು ರಾಜ್ಯ ಸರ್ಕಾರ ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು.

