ಮುಂದಿನ ನವೆಂಬರ್ 20ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಪಕ್ಷದ ಜಾಗದಲ್ಲಿ, ಹೈಬ್ರಿಡ್ ಸ್ವರೂಪದ ಬೃಹತ್ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಗಾಂಧಿ ಭಾರತ-100 ಹೆಸರಿನಲ್ಲಿ, ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೂ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನವೆಂಬರ್ ಕ್ರಾಂತಿ ಭಾಗವಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ರಾಜ್ಯ ನಾಯಕರೊಂದಿಗೆ ಚರ್ಚಿಸಲಿದ್ದು, ಬಹುತೇಕ ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾಂಗ್ರೆಸ್ಗೆ ಸೇರಿದ ಜಾಗದಲ್ಲಿದ್ದ ಹಳೆಯ ಜೆಡಿಎಸ್ ಕಚೇರಿಯನ್ನು ನೆಲಸಮಗೊಳಿಸಿದ್ದು, ರೇಸ್ಕೋರ್ಸ್ ರಸ್ತೆಗೆ ಹೊಂದಿಕೊಂಡಿರುವ ಪ್ರಮುಖ ವಾಣಿಜ್ಯ ಸ್ಥಳದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಕ್ಷದ ಕಚೇರಿ ಸ್ಥಾಪಿಸಲು ರಾಜ್ಯ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಬ್ಯುಲ್ಟ್ ಟು ಸೂಟ್ ಮಾದರಿಯಲ್ಲಿ ಬಾಡಿಗೆ ಬರುವಂತೆ, ವಾಣಿಜ್ಯ ಕಟ್ಟಡ ಹಾಗೂ ಪಕ್ಷದ ಕಚೇರಿ ಎರಡನ್ನೂ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಕಟ್ಟಡ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸಿದೆ. ಮಾಸಿಕ ಸುಮಾರು 2 ಕೋಟಿ ರೂಪಾಯಿ ಬಾಡಿಗೆ ಬರುವಂತೆ, ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.
ಇದೇ ವೇಳೆ ರಾಜ್ಯದ ಇತರ ಭಾಗಗಳಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು, ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಬಗ್ಗೆ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ಎಲ್ಲೆಲ್ಲಿ ನಿವೇಶನ ಲಭ್ಯವಿಲ್ಲವೋ ಅಲ್ಲಿ ಸರ್ಕಾರದ ಅಧೀನ ಸಂಸ್ಥೆಗಳಾದ ಯೋಜನಾ ಪ್ರಾಧಿಕಾರಗಳು, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಗಳಿಂದ ಮಂಜೂರಾತಿ ಪಡೆದು, ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ನಿವೇಶನ ಪಡೆಯಲು ಸೂಚಿಸಿದ್ದಾರೆ. ಒಂದು ವೇಳೆ ಸ್ಥಳೀಯ ಪ್ರಾಧಿಕಾರಗಳಿಂದ ನಿವೇಶನ ಪಡೆಯಲು ಕಷ್ಟವಾದರೆ, ಖಾಸಗಿ ನಿವೇಶನಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ನವೆಂಬರ್ 20ಕ್ಕೆ ಅಂತಿಮ ಗಡುವು ನೀಡಲಾಗಿದೆ.

