ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಶವ ಹೂತು ಪ್ರಕರಣ ಹೊಸ ಹಂತಕ್ಕೆ ಕಾಲಿಟ್ಟಿದೆ. ಈ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ಮೃತದೇಹಗಳ ಅವಶೇಷಗಳ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇದೀಗ ಎಸ್ಐಟಿಗೆ ತಲುಪಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಸ್ನಾನಘಟ್ಟ ಪಕ್ಕದ ಬಂಗ್ಲೆಗುಡ್ಡೆ ಕಾಡಿನಲ್ಲಿ ನಡೆದ ಶೋಧ ಕಾರ್ಯದ ವೇಳೆ ಎರಡು ಸ್ಥಳಗಳಲ್ಲಿ (6 ಮತ್ತು 11ಎ) ಪತ್ತೆಯಾದ ಮೃತದೇಹಗಳ ಅವಶೇಷಗಳು ಪುರುಷರದ್ದು ಎಂದು ಎಫ್ಎಸ್ಎಲ್ ವರದಿ ಸ್ಪಷ್ಟಪಡಿಸಿದೆ. ಅವಶೇಷಗಳ ಭೌತಿಕ ಲಕ್ಷಣಗಳು ಮತ್ತು ಪತ್ತೆಯಾದ ಸ್ಥಿತಿ ಆಧರಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ವರದಿ ವಂಶವಾಹಿ ವಿಶ್ಲೇಷಣೆಯ ಆಧಾರದ ಮೇಲೆ ತಯಾರಾಗಿಲ್ಲ. ಮೃತದೇಹಗಳಿಗೆ ಸಂಬಂಧಿಸಿದ ಕುಟುಂಬಸ್ಥರ ಡಿಎನ್ಎ ಮಾದರಿಗಳು ಲಭ್ಯವಿಲ್ಲದ ಕಾರಣ, ಅವು ಯಾರದ್ದು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಮೃತದೇಹಗಳ ಸ್ಥಿತಿ ಹಾಗೂ ಅವುಗಳ ಪ್ರಾಥಮಿಕ ಲಕ್ಷಣಗಳ ವಿವರ ಮಾತ್ರ ವರದಿಯಲ್ಲಿ ಒಳಗೊಂಡಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವರದಿ ಸಲ್ಲಿಸಲು ಸರ್ಕಾರದಿಂದ ಅಧಿಕೃತ ಸೂಚನೆ ಇನ್ನೂ ಬಂದಿಲ್ಲ. ಅಗತ್ಯವಿದ್ದಲ್ಲಿ ಇದುವರೆಗೆ ನಡೆದಿರುವ ತನಿಖೆಯ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗುವುದು; ಹೊಸ ಅಂಶಗಳು ಬೆಳಕಿಗೆ ಬಂದಂತೆ ವರದಿಯನ್ನು ಹಂತ ಹಂತವಾಗಿ ಪರಿಷ್ಕರಿಸಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

