ಇಷ್ಟು ದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಗ್ ಫೈಟ್ ನಡೀತಿತ್ತು. ಇದೀಗ ಡಿಸಿಎಂ ಪಟ್ಟಕ್ಕೂ ಪೈಪೋಟಿ ಶುರುವಾದಂತೆ ಕಾಣಿಸ್ತಿದೆ. ದಿನೇ ದಿನೇ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಈ ಸಾಲಿಗೆ ಸಚಿವ ಜಮೀರ್ ಅಹಮದ್ ಖಾನ್ ಸೇರ್ಪಡೆಯಾಗಿದ್ದಾರೆ.
ಒಂದು ವೇಳೆ ಹೈಕಮಾಂಡ್ ನಿರ್ಧರಿಸಿದರೆ, ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಇದ್ಯಾವುದೂ ಇಲ್ಲವೆಂದರೆ ಕೇವಲ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಲು ಸಿದ್ಧ ಎಂದು ಹಾವೇರಿಯಲ್ಲಿ ವಸತಿ ಸಚಿವ ಜಮೀರ್ ಹೇಳಿದ್ದಾರೆ.
ನವೆಂಬರ್ 26ರಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ಧಾರೆ. ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎನ್ನುವುದು ಕೇವಲ ವದಂತಿ ಹೊರತು ವಾಸ್ತವ ಸಂಗತಿಗಳಲ್ಲ.
ಡಿ.ಕೆ. ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಬಯಕೆ. ಪಕ್ಷಕ್ಕೆ ದುಡಿದವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದರಲ್ಲಿ ತಪ್ಪಿಲ್ಲ. ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯೂ ಇದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಜಮೀರ್ ಮಾತನಾಡಿದ್ದಾರೆ.

