ತಮಿಳುನಾಡಿನ ಸ್ಟಾರ್ ನಟ ಹಾಗೂ TVK ಪಕ್ಷದ ನಾಯಕ ದಳಪತಿ ವಿಜಯ್ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟಿಕೊಂಡು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯ ಪ್ರವೇಶದ ನಂತರ ಜನರಿಂದ ಬೆಂಬಲ ಪಡೆಯುತ್ತಿರುವ ವಿಜಯ್, ಈಗಾಗಲೇ ತಮ್ಮ ಪಕ್ಷದ ಉದ್ದೇಶ ಮತ್ತು ಭರವಸೆಗಳ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇತ್ತೀಚೆಗಷ್ಟೆ ನಡೆದ ಸಂಭ್ರಮ ಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿನ ವರ್ಷ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಆದರೆ ಪ್ರಣಾಳಿಕೆಯಲ್ಲಿ ಸೇರಲಿರುವ ಪ್ರಮುಖ ಅಂಶಗಳ ಬಗ್ಗೆ ಈಗಲೇ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಜನರಿಗೆ ಭರ್ಜರಿ ಭರವಸೆಯನ್ನೇ ನೀಡಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ, ಖಂಡಿತ ಬರುತ್ತೇವೆ. ಜನ, ಜನರಿಗಾಗಿ ನಮ್ಮನ್ನು ಅಧಿಕಾರಕ್ಕೆ ತರಲಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಜನರಿಗಾಗಿ ಮಾಡಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದನ್ನೆಲ್ಲ ಪ್ರಣಾಳಿಕೆಯಲ್ಲಿ ನಾವು ವಿವರಿಸಲಿದ್ದೇವೆ. ಆದರೆ ಅದಕ್ಕೆ ಮುಂಚಿತವಾಗಿಯೇ ಕೆಲ ವಿಷಯಗಳನ್ನು ನಾನು ಜನರ ಮುಂದಿಡಲು ಬಯಸುತ್ತೇನೆ.
ನಾವು ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೂ ಇರಲು ಮನೆ ಹಾಗೂ ಆ ಮನೆಯಲ್ಲಿ ಮೊಟಾರ್ ಬೈಕ್ ಇರುವಂತೆ ಮಾಡುತ್ತೇವೆ. ಕಾರು ನೀಡುವ ಗುರಿಯನ್ನೂ ಸಹ ನಾವು ಹೊಂದಿದ್ದೇವೆ ಅಂತ ವಿಜಯ್ ಹೇಳಿದ್ದಾರೆ.
ಪ್ರತಿ ಮಗುವು ಶಿಕ್ಷಿತರಾಗಬೇಕು. ಕನಿಷ್ಟ ಪದವಿ ವರೆಗೆ ಅವರು ಓದಬೇಕು.
ಜೊತೆಗೆ ಪ್ರತಿ ಮನೆಯಲ್ಲಿ ಒಬ್ಬ ವ್ಯಕ್ತಿಯಾದರೂ ಗ್ಯಾರೆಂಟಿ ಆದಾಯವನ್ನು ಹೊಂದಿರುವಂತೆ ಮಾಡುತ್ತೇವೆ. ಉದ್ಯೋಗ ಸೃಷ್ಟಿ ಮಾಡುತ್ತೇವೆ. ಸರ್ಕಾರಿ ಆಸ್ಪತ್ರೆಗಳ ಚಿತ್ರಣವನ್ನು ಬದಲಾಯಿಸುತ್ತೇವೆ. ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬುವಂತೆ ಮಾಡುತ್ತೇವೆ’ ಎಂದು ವಿಜಯ್ ಭರವಸೆ ನೀಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

