ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವನ್ನು ಪ್ರಶ್ನಿಸಿ, ಕೆ. ಶಂಕರ್ ಎನ್ನುವರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಸುಪ್ರೀಂನಲ್ಲಿ ವಿಚಾರಣೆ ನಡೆದಿದೆ. ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ, ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.
ಈ ಸಂಬಂಧ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ, ಮುಖ್ಯಮಂತ್ರಿಗಳ ಖುದ್ದು ಹಾಜರಾತಿಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, 224 ಜನ ಎಂಎಲ್ಎಗಳು ಅನರ್ಹವಾಗುವುದು ಖಚಿತವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
2023ರ ಚುನಾವಣೆಯಲ್ಲಿ ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಅವರು, ಗ್ಯಾರಂಟಿ ಘೋಷಣೆಯ ಪ್ರಮುಖ ರೂವಾರಿಗಳಾಗಿದ್ರು. ಗ್ಯಾರಂಟಿಗಳನ್ನ ಘೋಷಣೆ ಮಾಡಿ ತೆರಿಗೆ ದುಡ್ಡಲ್ಲಿ ಜನರಿಗೆ ಭಾಗ್ಯಗಳನ್ನ ಕೊಡುತ್ತಿದ್ದಾರೆ ಎಂದು, ಹೈಕೋರ್ಟ್ನಲ್ಲಿ ಎಲೆಕ್ಷನ್ ಪಿಟಿಷನ್ ಸಲ್ಲಿಕೆ ಮಾಡಿದ್ದೆವು. ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಸರಿಯಾದ ಅಂಶಗಳ ಮೇಲೆ ಬೆಳಕು ಚೆಲ್ಲದೇ, ನಮ್ಮ ಪಿಟಿಷನ್ ವಜಾ ಮಾಡಿದ್ರು. ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ಸುಪ್ರೀಂಕೋರ್ಟ್ನಲ್ಲಿ ಅಪೀಲ್ ಫೈಲ್ ಮಾಡಿದ್ದೆವು.
ಅಪೀಲ್ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ಇದರಲ್ಲಿ ಹಲವಾರು ತಪ್ಪುಗಳು, ಲೋಪದೋಷಗಳಿವೆ ಅಂತಾ ಹೇಳಿದೆ. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಮಾಡಿರುವುದು ಅಪರಾಧ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಘನ ನ್ಯಾಯಾಲಯದ ನ್ಯಾಯದ ಮುಂದೆ ಯಾವುದೇ ಅಧಿಕಾರ, ಅಂತಸ್ತು ಉಳಿಯುವುದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಅತೀ ಶೀಘ್ರದಲ್ಲೇ ಉಚಿತ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ನಂಬಿಕೆಯಿದೆ. ಎರಡು ವಾರದಲ್ಲಿ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ಗೆ ಹಾಜರಾಗಬೇಕಿದೆ ಎಂದು, ವಕೀಲ ದೇವರಾಜೇಗೌಡ ಹೇಳಿದ್ರು.



