ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಇಂದು. ವಿಷ್ಣುದಾದಾ ದೈಹಿಕವಾಗಿ ನಮ್ಮನ್ನ ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ಪ್ರತಿ ವರ್ಷ ವಿಷ್ಣು ಅಭಿಮಾನಿಗಳು ದಾದಾನ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಹೋಗಿ ನೆಚ್ಚಿನ ನಟನಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದ ನಟರು ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಳ್ಳುತ್ತಾರೆ.
ವಿಷ್ಣು ದಾದ ನೀವು ನಮ್ಮ ಹೃದಯದಲ್ಲಿ ಸದಾ ಜೀವಂತ
ಡಿಬಾಸ್ ದರ್ಶನ್ ಪ್ರೀತಿಯ ಯಜಮಾನರನ್ನು ನೆನಪು ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ‘ಇವರ ಮೇಲಿನ ಅಭಿಮಾನ ಪ್ರೀತಿ ಎಂದು ಕಮ್ಮಿಯಾಗಿಲ್ಲ. ಅಭಿಮಾನಿಗಳ ಹೃದಯದಲ್ಲಿ ನಿರಂತರ ಯಜಮಾನನಾಗಿರುವ ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣು ದಾದ ನೀವು ನಮ್ಮ ಹೃದಯದಲ್ಲಿ ಸದಾ ಜೀವಂತ, ವಿಷ್ಣು ದಾದ ಜನರ ಮನದಲ್ಲಿ ಎಂದಿಗೂ ಅಜರಾಮರ’ ಎಂದು ಪೋಸ್ಟ್ ಮಾಡಿದ್ದಾರೆ.
ಅಂದಹಾಗೇ ಈ ಬಂಧನ ಸಿನಿಮಾದಲ್ಲಿ ದರ್ಶನ್ ವಿಷ್ಣುವರ್ಧನ್ ಅವರ ಪುತ್ರನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಇಬ್ಬರು ಜೊತೆಯಾಗಿ ನಟಿಸಿದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಷ್ಟೇ ಅಲ್ಲದೇ ವಿಷ್ಣುವರ್ಧನ್ ಅಭಿನಯದ ಯಜಮಾನ ಸಿನಿಮಾದ ಟೈಟಲ್ ನಲ್ಲೇ ದಚ್ಚು ಸಿನಿಮಾ ಮಾಡಿದ್ದರು.

ವಿಷ್ಣು ಚಿರಾಯು-ಸುಮಲತಾ
”ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. #ವಿಷ್ಣು_ಚಿರಾಯು”ಎಂದು ಮಂಡ್ಯ ಸಂಸದೆ ಟ್ವೀಟ್ ಮಾಡಿದ್ದಾರೆ.
ಇವರಷ್ಟೇ ಅಲ್ಲದೇ ನಿರ್ದೇಶಕ ಸಂತೋಷ್ ಆನಂದ್ ರಾಮ್, ಸಚಿವರಾದ ಬಿ.ಸಿ.ಪಾಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ವಿಷ್ಣುವರ್ಧನ್ ಪುಣ್ಯಸ್ಮರಣೆಯ ಈ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.