ಬೆಂಗಳೂರು: ಸ್ವಾಮೀಜಿಗಳ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿದಂತ ಹೇಳಿಕೆ ಬಗ್ಗೆ ಅವರೇ ಉತ್ತರ ಕೊಡಲಿದ್ದಾರೆ. ಈಗಾಗಲೇ ಟ್ವಿಟ್ಟರ್ ಮೂಲಕವೂ ಆ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಎಲ್ಲಾ ಧರ್ಮ, ಸ್ವಾಮೀಜಿಗಳ ಬಗ್ಗೆ ಗೌರವವಿದೆ. ಅವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಎಲ್ಲಾ ಧರ್ಮಕ್ಕೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಸಿದ್ಧರಾಮಯ್ಯ ಅವರು ಏನೇ ಮಾತನಾಡಿದ್ದರೂ ಅದಕ್ಕೆ ಅವರೇ ಉತ್ತರ ಕೊಡಲಿದ್ದಾರೆ ಎಂದರು.
ಇನ್ನೂ ಹಿಜಾಬ್ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳಿಗೆ ವಿದ್ಯಾಭ್ಯಾಸ ಮುಖ್ಯವಾಗಿದೆ. ಆ ಬಗ್ಗೆ ವಿದ್ಯಾರ್ಥಿಗಳನ್ನು ಪೋಷಕರು ಕನ್ವಿನ್ಸ್ ಮಾಡಬೇಕು. ಮಕ್ಕಳ ಮನವೊಲಿಕೆಯ ಕೆಲಸ ಮಾಡಬೇಕು. ಮಕ್ಕಳು ಹಠ ಹಿಡಿಯಬಾರದು ಎಂದರು.
ಕಾಂಗ್ರೆಸ್ ಪಕ್ಷದಿಂದ ಸಂವಿಧಾನಿಕ ವಿಚಾರಗಳಿಗೆ ಬೆಲೆ ಕೊಡಲಿದೆ. ಸಂವಿಧಾನದಲ್ಲಿ ಇರುವ ವಿಚಾರಗಳೇ ನಮ್ಮ ಬೈಬಲ್, ನಮ್ಮ ಕುರಾನ್, ನಮ್ಮ ಭಗವದ್ಗೀತೆ ಆಗಿವೆ. ಈಗ ನ್ಯಾಯಾಲಯ ಒಂದು ತೀರ್ಮಾನ ಕೊಟ್ಟಿದೆ. ಕೆಲವರು ಅದನ್ನು ಒಪ್ತಾರೆ, ಕೆಲವರು ಒಪ್ಪಲ್ಲ. ಈ ಕೋರ್ಟ್ ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್ ಗೂ ಹೋಗಲು ಅವಕಾಶವಿದೆ. ನ್ಯಾಯಾಲಯ ದ ತೀರ್ಪನ್ನು ಸರಿಯಲ್ಲ ಅಂತಾ ಹೇಳುವುದಿಲ್ಲ ಎಂದರು.




