ಬೆಂಗಳೂರು: ಹಲಾಲ್ ಮಾಂಸ ನಿಷೇಧ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನೆ ಮಾಡುವವರ ವಿರುದ್ಧ, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಬಗ್ಗೆ ಸೈಬರ್ ಕ್ರೈಂ ಪೊಲೀಸರು ನಿಗಾ ವಹಿಸಿದ್ದಾರೆ. ಹಲಾಲ್ ನಿಷೇಧದ ಬಗ್ಗೆ ಪ್ರಚೋದನೆ ಮಾಡಿದ್ರೇ, ಪ್ರಚೋದನೆ ಹೇಳಿಕೆ ಕೊಟ್ಟರೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಒಂದು ಸಮುದಾಯಕ್ಕೆ ಈ ಹೇಳಿಕೆಗಳಿಂದ ಏನೋ ಆಗುತ್ತೆ ಅಂತ ಭಾವಿಸುವ ಅಗತ್ಯವಿಲ್ಲ. ಒಂದು ಸಮುದಾಯ ಹಲಾಲ್ ಮಾಡದೇ ಮಾಂಸ ಮಾರಾಟ ಮಾಡಲ್ಲ ಅನ್ನುತ್ತದೆ. ಇನ್ನೊಂದು ಸಮುದಾಯ ಹಲಾಲ್ ಮಾಂಸ ನಮ್ಮ ದೇವರಿಗೆ ಆಗಲ್ಲ ಅನ್ನುತ್ತೆ. ಈಗಿನ ವಿವಾದದ ಕೇಂದ್ರವೇ ಇದು. ಮೊದಲು ಹಿಜಾಬ್ ನಿಂದ ಆಕ್ಷನ್ ಶುರು ಆಯಿತು. ಈಗ ಹಲಾಲ್ ನಿಷೇಧ ವಿಚಾರ ಮುನ್ನೆಲೆಗೆ ಬಂದಿದೆ ಎಂದರು.




