ವಿಜಯನಗರ : ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಲು ಸಾರ್ವಜನಿಕ ವಲಯದ ಆಂಕರ್ ಬ್ಯಾಂಕನ್ನು ಜೋಡಿಸಲಾಗುವುದು. ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಲು 500 ಕೋಟಿ ರೂ. ಒದಗಿಸುವ ವಿನೂತನ ಕಾರ್ಯಕ್ರಮದಿಂದ 3.9 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಆಯೋಜಿಸಿರುವ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಬಡತನದಲ್ಲಿರುವ ಮಹಿಳೆಯರ ಆದಾಯವನ್ನು ಹೆಚ್ಚಿಸುವ ಮೂಲಕ ರಾಜ್ಯದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಹಿಳೆಯಲ್ಲಿ ಆರ್ಥಿಕ ಶಕ್ತಿಯನ್ನು ತುಂಬುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನರ ಸುತ್ತ ಅಭಿವೃದ್ಧಿ:
ರಾಜ್ಯ ಸರ್ಕಾರ ಗ್ರಾಮಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಜನರಿಗೆ ಅವಶ್ಯಕವಾಗಿರುವ ದಾಖಲೆಪತ್ರಗಳನ್ನು ಒದಗಿಸಲಾಗುತ್ತಿದೆ. ಕಂದಾಯ ದಾಖಲೆಗಳನ್ನು ಸರ್ಕಾರವೇ ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ಕಂದಾಯ ಕ್ರಾಂತಿ ಮಾಡಲಾಗಿದೆ. ಅಭಿವೃದ್ಧಿ ಸುತ್ತ ಜನರು ಸುತ್ತುವಂತಾಗಬಾರದು. ಜನರ ಸುತ್ತ ಅಭಿವೃದ್ಧಿಯಾಗಬೇಕು ಎಂದರು.
ಬಜೆಟ್ ನಲ್ಲಿ ರುವ ಕಾರ್ಯಕ್ರಮಗಳಿಗೆ ಏಪ್ರಿಲ್ ಅಂತ್ಯದೊಳಗೆ ಆದೇಶ:
ಬಜೆಟ್ ನಲ್ಲಿ ಘೋಷಣೆಯಾಗಿರುವ ಎಲ್ಲ ಕಾರ್ಯಕ್ರಮಗಳಿಗೆ ಏಪ್ರಿಲ್ ತಿಂಗಳ ಅಂತ್ಯದೊಳಗೆ ಆದೇಶಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ಕಾರ್ಯಕ್ರಮಗಳು ಮುಂದಿನ ತಿಂಗಳಿನಿಂದ ಅನುಷ್ಠಾನಗೊಳಿಸಲಾಗುವುದು. ಈ ಬಾರಿಯ ಆಯವ್ಯಯದಲ್ಲಿ ಎಸ್ ಸಿ ಎಸ್ ಪಿ-ಟಿಎಸ್ ಪಿ ಗಳಿಗೆ 28 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ 9 ಲಕ್ಷ ಮನೆಗಳುಬಡವರಿಗಾಗಿ ನಿರ್ಮಿಸಲಾಗುತ್ತಿದೆ. ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಶೀಘ್ರದಲ್ಲಿ ನೀಡಲಾಗುತ್ತದೆ.ರೈತರಿಗೆ ಡೀಸೆಲ್ ಸಹಾಯಧನ, ರೈತರ ಆರೋಗ್ಯ ರಕ್ಷಣೆ ಮಾಡುವ ಯಶಸ್ವಿನಿ ಯೋಜನೆ ಪ್ರಾರಂಭ 300 ಕೋಟಿ ವೆಚ್ಚ, 33 ಲಕ್ಷ ಜನ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲು ಕ್ರಮ. ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗಲು ಸೆಕೆಂಡರಿ ಅಗ್ರಕಲ್ಚರ್ ನಿರ್ದೇಶನಾಲಯ ಮಾಡಿ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಪ್ರತಿಯೊಂದು ಜಿಲ್ಲೆಯಲ್ಲಿ ಫುಡ್ ಪಾರ್ಕ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ನಿಗದಿತ ಸಮಯದೊಳಗೆ ಯೋಜನೆಗಳು ಪೂರ್ಣ:
ಕರುಣಾಕರರೆಡ್ಡಿ ತಮ್ಮ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡವರಲ್ಲ. ಬಳ್ಳಾರಿಯ ಇತಿಹಾಸವನ್ನು ತೆಗೆದುಕೊಂಡರೆ ಕೆಲವೇ ಕೆಲ ಕುಟುಂಬಗಳು ಬಳ್ಳಾರಿ ಯನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದವು. ಈ ಭಾಗದ ಜನನಾಯಕರು ಆ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ನಿಜವಾಗಿಯೂ ಜನರ ಧ್ವನಿಯಾಗಿ ಜನರ ವಿಶ್ವಾಸವನ್ನು ಗಳಿಸಿ, ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆರೆ ತುಂಬಿಸುವ ಕೆಲಸಕ್ಕೆ ಕರುಣಾಕರ ರೆಡ್ಡಿಯವರು ಕೈಗೆತ್ತಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಈ ತಿಂಗಳೊಳಗೆ ಅದರ ಕ್ರಿಯಾಯೋಜನೆಗೆ ಅನುಮೋದನೆ ನೀಡಿ, ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದರು.




