ಬೆಂಗಳೂರು: ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯಾಗುತ್ತಿದೆ. ಆ ತನಿಖೆಯ ವರದಿಯ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ನಿರ್ಣಯ ಮಾಡುತ್ತೇನೆ. ಪ್ರಾಥಮಿಕ ತನಿಖೆ ಆಗೋವರೆಗೂ ಈಶ್ವರಪ್ಪ ರಾಜೀನಾಮೆ ಪಡೆಯೋದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ನವರ ಕಾಲದಲ್ಲಿ ಹಲವಾರು ಕೊಲೆಗಳಾಗಿವೆ. ಆ ಕೇಸ್ ಗಳನ್ನು ವಾಪಾಸ್ ಕೂಡ ಪಡೆದಿದ್ದರು. ಇವರಿಂದಲೇ ಇಂದು ಈಗ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗುತ್ತಿದೆ. ಅವರಿಗೆ ನೈತಿಕತೆಗಿಂತ ರಾಜಕೀಯ ಲಾಭಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು.
ಸಂತೋಷ್ ಪ್ರಕರಣ ಸಂಬಂಧ ತನಿಖೆಯಾಗುತ್ತಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗೆ ಬರಲಿದೆ. ಅಲ್ಲಿಯವರೆಗೆ ಈಶ್ವರಪ್ಪ ಅವರ ರಾಜೀನಾಮೆಯನ್ನು ಪಡೆಯೋದಿಲ್ಲ. ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಕೂಡ ಮಧ್ಯ ಪ್ರವೇಶಿಸೋದಿಲ್ಲ ಎಂಬುದಾಗಿ ತಿಳಿಸಿದರು.




