ದಲಿತ ನಾಯಕ ಖರ್ಗೆ ಅವರನ್ನು ದಿಲ್ಲಿಗೆ ಓಡಿಸಲು ನೀವು ಬಿಜೆಪಿ ಬಾಲಂಗೋಚಿ ಆಗಿದ್ದು ಸುಳ್ಳಾ?: ಸಿದ್ದು ವಿರುದ್ಧ ದಳಪತಿ ಗುಡುಗು

ಮೈಸೂರು: ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಿಂದ ದೆಹಲಿಗೆ ಓಡಿಸಬೇಕು ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಲು ಸಿದ್ದರಾಮಯ್ಯ ಮಾತೃಪಕ್ಷದ ವಿರುದ್ಧವೇ ಏನೆಲ್ಲಾ ಷಡ್ಯಂತ್ರ ನಡೆಸಿದರು ಎಂಬುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಎಳೆಎಳೆಯಾಗಿ ಬಿಡಿಸಿಟ್ಟರು.

2008-09ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ʼಆಪರೇಷನ್‌ ಕಮಲದ ಸರಕಾರʼವನ್ನು ಶತಾಯಗತಾಯ ಉಳಿಸಲು ಸಿದ್ದರಾಮಯ್ಯ ಅವರು ಬಿಜೆಪಿ ಜತೆ ಡೀಲ್‌ ಮಾಡಿಕೊಂಡು ಎಷ್ಟು ಹಣ ಪಡೆದುಕೊಂಡರು ಹಾಗೂ ಆ ನಂತರ ಎದುರಾದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಾವ ರೀತಿ ಒಳಒಪ್ಪಂದ ಮಾಡಿಕೊಂಡರು ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಈ ಬಗ್ಗೆ ಮಾತನಾಡಲಿ. ಬಿಜೆಪಿ ಬೀ ಟೀಂ ನಾನಾ ಅಥವಾ ಸಿದ್ದರಾಮಯ್ಯನಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಹೆಲಿಕಾಪ್ಟರ್‌ ಜರ್ನಿ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ:

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಮಾಜಿ ಮುಖ್ಯಮಂತ್ರಿಗಳು; “2008ರಲ್ಲಿ ಇದೇ ಸುಳ್ಳುರಾಮಯ್ಯನಾದ ನೀವು ಮತ್ತು ಅಂದಿನ ಮುಖ್ಯಮಂತ್ರಿ ಒಂದೇ ಹೆಲಿಕಾಪ್ಟರ್‌ʼನಲ್ಲಿ ಒಟ್ಟಿಗೆ ಹಾವೇರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದಿರಿ. ಆಗ ನೀವಿಬ್ಬರೂ ಏನು ಚರ್ಚೆ ಮಾಡಿಕೊಂಡು ಬಂದಿರಿ? ಆಗ ನಡೆದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದು ಮೂರು ಸೀಟು ನಾನು ಗೆದ್ದೆ. ಒಂದು ಸೀಟನ್ನೂ ನೀವು (ಸಿದ್ದರಾಮಯ್ಯ) ಗೆಲ್ಲಲಿಲ್ಲ, ಏಕೆ? ಆಗ ನೀವು ಬಿಜೆಪಿ ಬೀ ಟೀಂ ಆಗಿರಲಿಲ್ಲವಾ? ಆವತ್ತು ನಿಮಗೆ ಎಷ್ಟು ಹಣ ಸಂದಾಯ ಆಯಿತು ಎಂಬುದನ್ನು ನಿಮಗೆ ಹಣ ತಂದುಕೊಟ್ಟವರೇ ನನಗೆ ಹೇಳಿದ್ದಾರೆ. ಈಗ ಹೇಳಿ, ಯಾರು ಬಿಜೆಪಿ ಬೀ ಟೀಂ? ನಮ್ಮಪ್ಪನ ಹೆಸರಿನಲ್ಲಿ ಪ್ರಮಾಣ ಮಾಡಬೇಕಾ ನಿಮಗೆ?” ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ. ಅದಕ್ಕೆ ನನ್ನನ್ನೇ ಪದೇಪದೆ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಬಿಜೆಪಿ ಭಯ ಇಲ್ಲ. ಎಲ್ಲಿ ನಾನು ಬಂದು ಬಿಡುತ್ತೇನೋ ಅನ್ನುವ ಭಯ ಹೆಚ್ಚಾಗಿ ಅವರಿಗಿದೆ. 2006ರಿಂದಲೂ ಸಿದ್ದರಾಮಯ್ಯಗೆ ನನ್ನ ಭಯ ಶುರುವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮಾತೆತ್ತಿದರೆ ಸಿದ್ದರಾಮಯ್ಯ ಈ ಸರಕಾರವನ್ನು ಬೈಯ್ಯುತ್ತಾರೆ. ಆದರೆ ಈ ಸರಕಾರ ಬರಲು ಅವರೇ ಕಾರಣ. ಅವರು ನಡೆಸಿದ ಷಡ್ಯಂತ್ರದಿಂದಲೇ ಈ ಸರಕಾರ ಬಂತು. ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಿಮ್ಮ ಪಕ್ಷದ ಶಾಸಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರತಿ ಸಭೆಯಲ್ಲೂ ಅವರು ಸಂದಾಯ ಮಾಡುತ್ತಿದ್ದ ರೀತಿಯಲ್ಲಿ ನಾನು ಸಂದಾಯ ಮಾಡಬೇಕಿತ್ತಾ? ಕೆಲ ಅಧಿಕಾರಿಗಳನ್ನು ನಾನು ಸಿಎಂ ಆಗಿದ್ದಾಗ ಬಾಗಿಲಿಗೂ ಬಿಟ್ಟುಕೊಂಡಿರಲಿಲ್ಲ. ಆದರೆ, ಅವರು ಜಾತಿ ಮತ್ತು ಹಣದ ಕಾರಣಕ್ಕೆ ಅಂಥವರಿಗೆಲ್ಲ ಮಣೆ ಹಾಕಿದರು. ನಾನು ಜಾತಿ ಬಳಸಿ ಅಧಿಕಾರ ನಡೆಸಲಿಲ್ಲ ಎಂದು ಕುಮಾರಸ್ವಾಮಿ ಅವರು ನೇರ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರದ ಬಗ್ಗೆ ಸುಳ್ಳುರಾಮಯ್ಯ ಬರೀ ಸುಳ್ಳನ್ನೇ ಮಾತನಾಡುತ್ತಿದ್ದಾರೆ. ಅರ್ಕಾವತಿ ಡೀಲ್ ಬಗ್ಗೆ ಹೇಳಿ ಎಂದರೆ ಏನೂ ಹೇಳಲ್ಲ. ಅಲ್ಲಿನ ರೀಡೂ ರಿಂಗ್‌ ಮಾಸ್ಟರ್‌ ಯಾರು? ಎಂದು ಚಾಟಿ ಬೀಸಿದರು ಕುಮಾರಸ್ವಾಮಿ.

ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ? ಎಂದು ಸಿದ್ದರಾಮಯ್ಯಗೆ ಕೇಳಿದ ಅವರು; ಹತ್ತೇ ನಿಮಿಷದಲ್ಲಿ ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿಂದಿರುವ ಸತ್ಯವನ್ನು ಜನರ ಮುಂದೆ ಇಡಬಹುದು. ಸರಕಾರಕ್ಕೆ ಇಷ್ಟನ್ನು ಹೇಳುವ ಧೈರ್ಯ ಸಿದ್ದರಾಮಯ್ಯ ಅವರಿಗಿದೆಯಾ? ನಾನೇನು ಬಿಜೆಪಿ ಸರಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದೀನಾ? ನನ್ನ ಹೋರಾಟದಿಂದಲೇ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಅದರ ಲಾಭದಿಂದ ಸಿಎಂ ಆದ ವ್ಯಕ್ತಿ ಈಗ ಸಂತೆ ಭಾಷಣ ಮಾಡುತ್ತಿದ್ದಾರೆ ಎಂದು ಛೇಡಿಸಿದರು.

ನಾನು ಈಶ್ವರಪ್ಪ ಅವರ ಲಾಯರ್‌ ಅಲ್ಲ:

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಗ್ಗೆ ತಾವು ನೀಡಿರುವ ಹೇಳಿಕೆಗಳನ್ನು ತಿರುಚುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದರು.

ಈಶ್ಚರಪ್ಪ ಬದಲು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸಬೇಕಾ? ಎಂದು ಹೇಳಿರುವ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. “ಸಿದ್ದರಾಮಯ್ಯ ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು. 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣವನ್ನು ಇಟ್ಟುಕೊಂಡು ಷಡ್ಯಂತ್ರ ರೂಪಿಸಿದ್ದರು. ತಮ್ಮ ರಾಜಕೀಯ ವಿರೋಧಿಗಳನ್ನು ಮುಗಿಸುತ್ತಾ ಬಂದಿರುವ ಸಿದ್ದರಾಮಯ್ಯ, ನನ್ನನ್ನೂ ಟಾರ್ಗೇಟ್‌ ಮಾಡಿದ್ದರು. ಆದರೆ, ಅವರಿಂದ ಏನೂ ಮಾಡಲು ಆಗಲಿಲ್ಲ” ಎಂದು ಹೇಳಿದರು.

ಈಶ್ವರಪ್ಪ ಬಗ್ಗೆ ನಾನು ಸತ್ಯಸಂಗತಿಗಳನ್ನಷ್ಟೇ ಮಾತನಾಡಿದ್ದೇನೆ. ಸಿದ್ದರಾಮಯ್ಯಗೆ ಸತ್ಯವನ್ನು ಹೇಳುವ ಧೈರ್ಯಾ ಇದೆಯಾ ಎಂದು ಪ್ರಶ್ನಿಸಿದ ಅವರು; ನಾನು ಚಪಲಕ್ಕೆ ಅಥವಾ ಯಾರಿಗೋ ತೊಂದರೆ ಕೊಡುವ ಉದ್ದೇಶದಿಂದ ಮಾತನಾಡುವುದಿಲ್ಲ. ಆದರೆ, ಸಿದ್ದರಾಮಯ್ಯ ಹಾಗಲ್ಲ. ಅವರು ಮಹಾನ್‌ ಸುಳ್ಳುರಾಮಯ್ಯ. ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸಿದ ಮಹಾನ್‌ ನಾಯಕ ಎಂದು ಛೇಡಿಸಿದರು.

ನಾನು ಕೆ.ಎಸ್.ಈಶ್ವರಪ್ಪ ಅವರ ಲಾಯರ್ ಅಲ್ಲ. ಅವರ ಬಗ್ಗೆ ನನಗೆ ಯಾವ ರೀತಿಯ ಸಾಫ್ಟ್ ಕಾರ್ನರ್ ಕೂಡ ಇಲ್ಲ. ನಾನು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ. ಸಾವಿಗೂ ಮುನ್ನ ಗುತ್ತಿಗೆದಾರ ಸಂತೋಷ್‌ ಅವರು ವಾಟ್ಸಾಪ್‌ ಸಂದೇಶ ಕಳಿಸಿದ್ದಾರೆ. ಅವರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಒಂದು ವೇಳೆ ಈಶ್ವರಪ್ಪ ತಪ್ಪು ಮಾಡಿದ್ದರೆ, ಆತ್ಮಹತ್ಯೆಗೆ ಅವರೇ ಕಾರಣಕರ್ತರಾಗಿದ್ದರೆ ಅವರನ್ನೂ ಬಂಧಿಸಿ. ಆದರೆ, ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಎಂದು ಸ್ವತಃ ಸಂತೋಷ್ ಹೇಳಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಹೇಳಿದ್ದೇನೆ ಎಂಬುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಾಂಗ್ರೆಸ್ ನಾಯಕರು ಪೈಪೋಟಿಗೆ ಬಿದ್ದು ಸಂತೋಷ್‌ ಅವರ ಕುಟುಂಬಕ್ಕೆ ಹಣದ ನೆರವು ನೀಡುತ್ತಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂಧಿಸುತ್ತೇನೆ. ಸಿದ್ದರಾಮಯ್ಯ ದಿನ ಎರಡು ದಿನ ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಆಗ ಈಶ್ವರಪ್ಪ ಅವರ ವಿರುದ್ಧ ದಾಖಲೆಗಳನ್ನು ಒದಗಿಸಿ ಅವರನ್ನು ಬಂಧಿಸುವಂತೆ ಒತ್ತಾಯ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರತಿಪಕ್ಷ ನಾಯಕನಿಗೆ ಟಾಂಗ್‌ ಕೊಟ್ಟರು.

ಪೊಲೀಸ್‌ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಅವರು ಮೃತಪಟ್ಟಾಗ ನಾನು ಅವರ ಪರವಾಗಿ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿದೆ. ಅಂದಿನ ಸಿದ್ದರಾಮಯ್ಯ ಸರಕಾರದ ವೈಫಲ್ಯದಿಂದಲೇ ಹಂಡೀಭಾಗ್‌ ಸಾವಿಗೀಡಾದರು. ಅದಕ್ಕೆ ಬಿಜೆಪಿ ಕೂಡ ಕಾರಣ. ಆ ಪಕ್ಷದ ಶಾಸಕರು ಅಲ್ಲಿ ಏನೆಲ್ಲಾ ಮಾಡಿದ್ದರು ಎನ್ನುವುದು ಸರಕಾರಕ್ಕೆ ಗೊತ್ತಿತ್ತು. ಹಾಗೆಯೇ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನೂ ಅರೆಸ್ಟ್ ಮಾಡಿ ಎಂದು ನಾನು ಹೇಳಿದೆನಾ? ಎಲ್ಲದರಲ್ಲೂ ವಿನಾಕಾರಣ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಪರಾಧಿ ಎಂದಾರೆ ಏನು ಮಾಡುವುದು? ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ನಾಯಕರು ವೈಯಕ್ತಿಕ ನೆಲೆಗಟ್ಟಿನಲ್ಲಿ, ದ್ವೇಷದಿಂದ ಹೋರಾಟ ಮಾಡ್ತಿದ್ದಾರೆ. ಸರಕಾರ ಐದೇ ನಿಮಿಷದಲ್ಲಿ ಇದೆಲ್ಲವನ್ನು ಬಗೆಹರಿಸಬಹುದು. ಪಾರದರ್ಶಕತೆ ಇದ್ದರೆ ಎಲ್ಲವನ್ನೂ ಜನರ ಮುಂದೆ ಇಡಬಹುದು. ಆದರೆ, ಸರಕಾರ ಅದಾವುದನ್ನೂ ಮಾಡದೇ ಸುಮ್ಮನಿದೆ ಎಂದು ಅವರು ದೂರಿದರು.

ಸರ್ವಧರ್ಮ ಗುರುಗಳ ಸಭೆ ಕರೆಯಿರಿ:

ರಾಜ್ಯದಲ್ಲಿ ಉಂಟಾಗಿರುವ ಧಾರ್ಮಿಕ ನಂಬಿಕೆಗಳ ಕುರಿತ ಗದ್ದಲಗಳನ್ನು ಬಗೆಹರಿಸಲು ಸರಕಾರ ಕೂಡಲೇ ಎಲ್ಲ ಧರ್ಮಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಬೇಕು. ಈ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ಹುಬ್ಬಳ್ಳಿ ಗಲಾಟೆ ಆತಂಕಕಾರಿ. ಇಬ್ಬರು ಪೊಲೀಸರ ಹತ್ಯೆಗೆ ಸ್ಕೆಚ್ ಹಾಕಿದ್ದರು ಈಗ ಹೇಳುತ್ತಿದ್ದೀರಿ. ಈ ವಿಚಾರ ಕಳವಳಕಾರಿ. ಅವರಿಗೆ ಪ್ರೇರೆಪಣೆ ಕೊಟ್ಟವರು ಯಾರು? ಅಷ್ಟು ದೊಡ್ಡ ಗುಂಪು ಸೇರಲು ಅವಕಾಶ ಕೊಟ್ಟವರು ಯಾರು? ಪೊಲೀಸ್ ವಾಹನದ ಮೇಲೆ ನಿಂತು ಭಾಷಣ ಮಾಡಲು ಅವಕಾಶ ಕೊಟ್ಟವರು ಯಾರು? ವಾಹನ ಹತ್ತಿ ಭಾಷಣ ಮಾಡಿದ ವ್ಯಕ್ತಿಯನ್ನು ಏಕೆ ಬಂಧಿಸಿಲ್ಲ? ಆತ ಎಲ್ಲಿ ಹೋದ? ಈ ವಿಷಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಪಾತ್ರವೂ ಇದೆ. ಸರ್ವಜನಾಂಗದ ತೋಟಕ್ಕೆ ಒಬ್ಬರು ಬೆಂಕಿ ಹಚ್ಚುತ್ತಾರೆ, ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ದೆಹಲಿ ಬುಲ್ಡೋಜರ್ ಪ್ರಕರಣಕ್ಕೆ ಹೆಚ್‌ಡಿಕೆ ಹೇಳಿದ್ದೇನು?:

ದೆಹಲಿಯಲ್ಲಿ ಬುಲ್ಡೋಜರ್ʼಗಳ ಮೂಲಕ ʼಕೆಲವರʼ ಕಟ್ಟಡಗಳನ್ನು ತೆರವು ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಕುಮಾರಸ್ವಾಮಿ ಅವರು ನೀಡಿದ ಉತ್ತರ ಹೀಗಿತ್ತು; “ಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಹಿತಿ ನೀಡುತ್ತೇನೆ. ಬಿಜೆಪಿಯ ನಾಯಕರು, ಮೋದಿ ಅವರು ಅದನ್ನೆಲ್ಲವನ್ನು ತೆರವುಗೊಳಿಸಲು ಸಿದ್ದರಿದ್ದೀರಾ? ಮೈಸೂರಿನಲ್ಲೂ ಮಾಹಿತಿ ಕೊಡುತ್ತೇನೆ. ನೈಸ್‌ ಕಂಪನಿಗೆ ರೆಡ್ʼಕಾರ್ಪೆಟ್ ಹಾಕಿ ಭೂಮಿ ನೀಡಿದ್ದೀರಾ. ಸರಕಾರದ ಭೂಮಿಯನ್ನೇ ನೈಸ್ ಕಂಪನಿಗೆ ಕೊಟ್ಟು, ಅದೇ ಭೂಮಿಯನ್ನು 100 ಕೋಟಿ ಕೊಟ್ಟು ಮೆಟ್ರೋ ಯೋಜನೆ ಅಂತ ಖರೀದಿ ಮಾಡಲು ಹೊರಟಿದ್ದಾರೆ. ಸುಳ್ಳಿನರಾಮಯ್ಯನಿಗೆ ಇದೆಲ್ಲ ಕಾಣಲ್ವ?” ಎಂದು ಛೇಡಿಸಿದರು.

ಬುಲ್ಡೋಜ್ ಮಾಡಿದರೆ ಯಾರಿಗೂ ಲಾಭ ಇಲ್ಲ. ಸಂಪತ್ತು ಲೂಟಿ ಮಾಡಿರುವವರ ಬೆಂಕಿ ಹಚ್ಚುವವರ ವಿರುದ್ದ ಕಾರ್ಯಾಚರಣೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿಗಳು ಸಲಹೆ ಮಾಡಿದರು.

ರಾಜ್ಯ ಸರಕಾರ ಅಸಮರ್ಥವಾಗಿದೆ. ಯಾವುದೇ ಸಮಸ್ಯೆಗೂ ಪರಿಹಾರ ಕೊಡಲು ಸಾಧ್ಯವಾಗದ ಸರಕಾರವಿದು. ಸಿಎಂ ಬರೀ ಬಾಯಿಮಾತಿನಲ್ಲಿ ಹೇಳುತ್ತಾರೆ. ದೆಹಲಿ ಆರ್ ಎಸ್ ಎಸ್ ಮುಖಂಡರಿಗೆ ತೋರಿಸುವುದಲ್ಲ ಸಿಎಂ ಕೆಲಸ ಎಂದರೆ, ಯಾರನ್ನೋ ಮೆಚ್ಚಿಸಲು ಅವರು ಮುಖ್ಯಮಂತ್ರಿ ಆಗಿಲ್ಲ. ಅವರು ಜನರನ್ನು ಮೆಚ್ಚಿಸಲು ಆಡಳಿತ ನಡೆಸಬೇಕು. ಯಾರೋ ಹೇಳಿದ್ದನ್ನು, ಯಾರೋ ಕೊಡುವ ನಿರ್ದೇಶನದಂತೆ ಸಿಎಂ ಅಧಿಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪಿಸಿದರು.

ಯಾರೊಂದಿಗೂ ಮೈತ್ರಿ ಇಲ್ಲ:

ಬಿಜೆಪಿ ಜೊತೆಯಾಗಲಿ, ಯಾರ ಜತೆಯೂ ನಾನು ಮೈತ್ರಿ ಮಾಡಿಕೊಳ್ಳುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು 150 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿವೆ. ಇವರಿಗೆ ಬಹುಮತ ಬಂದ ಮೇಲೆ ನನ್ನನ್ನು ಯಾವ ಊರು ದಾಸಯ್ಯ ಬೆಂಬಲ ಕೊಡಿ ಎಂದು ಕೇಳುತ್ತಾನೆ? ೧೫೦ ಸೀಟು ಗೆಲ್ಲುವ ಉಮೇದು ಇರುವವರಿಗೆ ಮೈತ್ರಿ ವಿಚಾರ ಏಕೆ? ಎಂದು ಪ್ರತಿಪಕ್ಷ ನಾಯಕನನ್ನು ಕುಟುಕಿದರು ಕುಮಾರಸ್ವಾಮಿ.

About The Author