ಹುಬ್ಬಳ್ಳಿ : ಎಲ್ಲಾ ಧರ್ಮೀಯರು ಶಾಂತಿಯಿಂದ ನೆಲೆಸಿರುವ ಸ್ಥಳ ಭಾರತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿವಿಧ ದೇಶಗಳಲ್ಲಿ ಭಾರತದವರು ನೆಲೆಸಿದ್ದು, ಇಲ್ಲಿ ಕೋಮುವಾದ ಹೆಚ್ಚಾದರೆ ಅಲ್ಲಿ ಯಾವ ಪರಿಸ್ಥಿತಿ ಉಂಟಾಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು , ಧಾರ್ಮಿಕತೆ, ಕೋಮುವಾದ ಅವರವರ ಮನಸ್ಸಿನಲ್ಲಿದೆ. ಭಾರತದಂಥ ದೇಶದಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಿನಿಂದ ಪ್ರೀತಿ ವಿಶ್ವಾಸದಿಂದ ನೆಲೆಸಿರುವರು. ಇದು ಅಂಥ ಮಹಾನ್ ಸ್ಥಳ ಭಾರತ. ಬೇರೆ ರಾಷ್ಟ್ರಗಳಲ್ಲಿ ಧರ್ಮದ ಹೆಸರಲ್ಲಿ ಭಯೋತ್ಪಾದನೆ ಆಗಿರುವುದನ್ನು ನೋಡಿದ್ದೇವೆ. ನಮ್ಮ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಸಂವಿಧಾನವನ್ನು ನಡೆಸಿಕೊಂಡು ಹೋದರೆ ಸಾಕು. ಒಬ್ಬರಿಗೊಬ್ಬರು ಸಲಹೆ ನೀಡುವ ಅಗತ್ಯವಿಲ್ಲ. ಅವರವರ ಕರ್ತವ್ಯವನ್ನು ನಿಭಾಯಿಸುವುದು ಬಹಳ ಮುಖ್ಯ ಎಂದರು.
ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಆರೋಪ ಎದುರಿಸುತ್ತಿರುವ ವೈದ್ಯರ ಪ್ರಕರಣದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.




