ಮಂಡ್ಯ : ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಮಧು ಜಿ. ಮಾದೇಗೌಡ ಅವರು ಜಯಗಳಿಸಿದ್ದಕ್ಕೆ ಅವರಿಗೆ ಮೊದಲಿಗೆ ಅಭಿನಂದನೆಯನ್ನು ಹೇಳಬಯಸುತ್ತೇನೆ. 2023ರ ವಿಧಾನಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಿದ್ದು, ಸುಶಿಕ್ಷಿತ ವರ್ಗವಾದ ಪದವೀಧರರು ಕಾಂಗ್ರೆಸ್ ಅನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಕಳೆದ 40 ವರ್ಷಗಳಿಂದ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ನಮ್ಮ ಪಕ್ಷದ ಪರ ನಿಂತಿದ್ದು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದಲ್ಲಿ ಅಭೂತಪೂರ್ವ ಮುನ್ನಡೆಯನ್ನು ಕೊಟ್ಟಿದ್ದಾರೆ. ಇದಕ್ಕಾಗಿ ಮತದಾರರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಜೊತೆಗೆ ಜೆಡಿಎಸ್ ಸಹ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದು, ಹಾಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಸುಶಿಕ್ಷಿತ ಮತದಾರರು ಕೈ ಹಿಡಿದಿದ್ದಾರೆ
ಇನ್ನು ಮಧು ಜಿ. ಮಾದೇಗೌಡರ ಗೆಲುವಿನ ಬಗ್ಗೆ ನಾನು ಈ ಮೊದಲೇ ಹೇಳಿಕೆ ನೀಡಿದ್ದೆ. ಅದೀಗ ಫಲಿತಾಂಶದ ಮೂಲಕ ಹೊರಹೊಮ್ಮಿದೆ. ಮಧು ಮಾದೇಗೌಡರ ಗೆಲುವು ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೇ ಸತ್ಯ ಎಂಬ ಮಾತನ್ನು ಹೇಳಿದ್ದೆ. ಅಲ್ಲದೆ, ಮಧು ಅವರನ್ನು ಪಕ್ಷಾತೀತವಾಗಿ ಜನರು ಬೆಂಬಲಿಸುತ್ತಾರೆ ಎಂದು ಹೇಳಿದ್ದೆ. ನನ್ನ ಈ ಎರಡೂ ಮಾತು ಇಂದು ನಿಜವಾಗಿದೆ. ಚುನಾವಣಾ ಪ್ರಚಾರದ ವೇಳೆಯೇ ನನಗೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿನ ಬಗ್ಗೆ ವೈಯಕ್ತಿಕವಾಗಿ ಗೋಚರಿಸಿತ್ತು. ಇನ್ನು ಶಿಕ್ಷಕ ಮತ್ತು ಪದವಿಧರ ಕ್ಷೇತ್ರದಲ್ಲಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಧು ಮಾದೇಗೌಡರು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆಂಬ ವಿಶ್ವಾಸ ನನಗಿದೆ. ಪದವೀಧರರ ಹಲವು ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ನಲ್ಲಿ ಮಧು ಮಾದೇಗೌಡರು ಧ್ವನಿ ಎತ್ತಲಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇನ್ನು ಹೊಸ ಶೆಕೆ ಪ್ರಾರಂಬವಾಗಲಿದೆ.
ಈ ಯಶಸ್ಸಿಗೆ ಕಾರಣರಾದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ್ ರವರು, ಕೆಪಿಸಿಸಿ ವಕ್ತಾರರಾದ ಚೆಲುವರಾಯಸ್ವಾಮಿ ಅವರು ಸೇರಿದಂತೆ ಇನ್ನಿತರ ನಾಯಕರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.




