ಆಜಾದಿ ಕಾ ಅಮೃತ ಮಹೋತ್ಸವ: ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಹಾಗೂ ಅದ್ಧೂರಿ ಆಚರಣೆ – ಸಿಎಂ ಬೊಮ್ಮಾಯಿ

ಮೈಸೂರು : ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ಆಚರಿಸಲಿದ್ದು, ರಾಜ್ಯದ ಮನೆಮನೆಗಳಲ್ಲಿ, ಅಂಗಡಿಮುಂಗಟ್ಟು, ಕಚೇರಿ, ಕೈಗಾರಿಕೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಸ್ವಾತಂತ್ರ್ಯ ಹಬ್ಬದ ಸಂಭ್ರಮದೊಂದಿಗೆ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಪ್ರತಿಯೊಂದು ಗ್ರಾಮಪಂಚಾಯತಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹರಘರ್ ತಿರಂಗಾ ಕಾರ್ಯಕ್ರಮದಡಿ 1 ಕೋಟಿಗಿಂತ ಹೆಚ್ಚು ಧ್ವಜಗಳನ್ನು ಗ್ರಾಮಪಂಚಾಯತಿಗಳಿಗೆ ವಿತರಿಸಲಾಗಿದ್ದು, ತಲಾ 400 ರಿಂದ 500 ಧ್ವಜಗಳನ್ನು ಪ್ರತಿ ಗ್ರಾಮಪಂಚಾಯತಿಗೆ ವಿತರಣೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವ ಮತ್ತು ದೇಶ ಕಟ್ಟುವ ಸಂಕಲ್ಪದ ವಿಚಾರಗಳನ್ನು ಕರ್ನಾಟಕದ ರಾಜ್ಯದೆಲ್ಲೆಡೆ ಇದೇ ಆಗಸ್ಟ್ 15 ರಿಂದ ಮುಂದಿನ ಆಗಸ್ಟ್ 15ವರೆಗೂ ಪ್ರಧಾನಿ ಮೋದಿಯವರ ಅಮೃತಕಾಲ ದ ಕಲ್ಪನೆಯನ್ನು ಪ್ರಚಾರ ಮಾಡುವ ವಿಶೇಷ ಕಾರ್ಯಕ್ರಮವನ್ನು ರಾಜ್ಯಸರ್ಕಾರ ಹಮ್ಮಿಕೊಂಡಿದೆ ಎಂದರು.

ತ್ರಿವರ್ಣ ಧ್ವಜ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ

ಹರಘರ್ ತಿರಂಗಾ ಕಾರ್ಯಕ್ರಮದ ಬಗ್ಗೆ ವ್ಯಕ್ತವಾಗಿರುವ ಟೀಕೆಗಳಿಗೆ ಪ್ರತಿಕ್ರಯಿಸಿ, ತ್ರಿವರ್ಣ ಧ್ವಜ ನಮ್ಮ ತ್ಯಾಗ ಬಲಿದಾನದಿಂದ ಅಹಿಂಸಾತ್ಮಕವಾಗಿ ಪಡೆದಿರುವಂತಹ ಸ್ವಾತಂತ್ರ್ಯದ ಧ್ವಜ. ಈ ಧ್ವಜದ ಅಡಿಯಲ್ಲಿ ಭಾರತ ರಾಷ್ಟ್ರ ನಿರ್ಮಾಣವಾಗಿದೆ. ಸ್ವತಂತ್ರಪೂರ್ವದಲ್ಲಿ ನಮ್ಮ ಹಿರಿಯರು ಹೋರಾಟ ಮಾಡಿ ಗಳಿಸಿದ ಸ್ವಾತಂತ್ರ್ಯವಾಗಿದೆ. ಸ್ವಾತಂತ್ರ್ಯ ಹೋರಾಟವನ್ನು ಸರಿಯಾಗಿ ತಿಳಿದು, ತಿರುಚದೇ ಮುಂದಿನ ಜನಾಂಗಕ್ಕೆ ತಿಳಿಹೇಳುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜ ನಮ್ಮನ್ನೆಲ್ಲಾ ಒಗ್ಗೂಡಿಸುವ ಶಕ್ತಿಯಾಗಿದೆ. ಈ ತ್ರಿವರ್ಣ ಧ್ವಜದ ಅಡಿಯಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭವಿಷ್ಯ ಅಡಗಿದೆ. ಇಂತಹ ಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಯಾವುದೇ ದೇಶ ಭಕ್ತನಿಗೆ ಸೂಕ್ತವಾದುದಲ್ಲ. ಇಂತಹ ಕೆಲಸವನ್ನು ಯಾರೂ ಮಾಡಬಾರದು. ದೇಶದ ಜನ ಇನ್ನಷ್ಟು ಸ್ಪೂರ್ತಿ ಹಾಗೂ ಪ್ರೇರಣೆಯಿಂದ ತಿರಂಗಾ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾರೆ ಎಂದು ತಿಳಿಸಿದರು.

ರಸ್ತೆ ಹಾಗೂ ಸೇತುವೆಗಳ ದುರಸ್ತಿ ಕಾರ್ಯ ಶೀಘದಲ್ಲಿ ಪ್ರಾರಂಭ

ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ವಿಶೇಷವಾಗಿ ಮೈಸೂರಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಎಲ್ಲ ಮನೆಗಳಿಗೂ ಮೊದಲ ಕಂತಿನ ಪರಿಹಾರವನ್ನು ನೀಡಲಾಗಿದೆ. ಮನೆಗಳಿಗೆ ನೀರು ನುಗ್ಗಿರುವುದಕ್ಕೆ 10,000 , ಪೂರ್ಣ ಹಾನಿಯಾಗಿರುವ ಮನೆಗಳಿಗೆ ನೀಡಲಾಗುವ 5 ಲಕ್ಷ ರೂ.ಗಳಲ್ಲಿ 95,000 ರೂ.ಗಳನ್ನು ಮೊದಲ ಕಂತಾಗಿ ಈಗಾಗಲೇ ನೀಡಲಾಗಿದೆ. ಭಾಗಶ: ಹಾನಿಯಾಗಿರುವ ಮನೆಗಳಿಗೆ ನೀಡಲಾಗುವ 3 ಲಕ್ಷ ರೂ.ಗಳಲ್ಲಿ 95,000 ರೂ.ಗಳನ್ನು ಮೊದಲ ಕಂತಾಗಿ ಈಗಾಗಲೇ ನೀಡಲಾಗಿದೆ. ಹಾನಿಯಾಗಿರುವ ರಸ್ತೆಗಳು, ಸೇತುವೆಗಳ ದುರಸ್ತಿಗೆ ಈಗಾಗಲೇ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ 300 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಗೆ 200 ಕೋಟಿ ರೂ. ನೀಡಲಾಗಿದ್ದು, ದುರಸ್ತಿ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.

ಬೆಳೆಪರಿಹಾರ

ಬೆಳೆನಾಶ ಪರಿಹಾರಕ್ಕಾಗಿ ಜಂಟಿ ಸರ್ವೇಯಾದ ತಕ್ಷಣ , ವಿಪತ್ತು ನಿರ್ವಹಣೆ ಇಲಾಖೆಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ 14 ಲಕ್ಷ ರೈತರಿಗೆ ಕೇವಲ ಒಂದೂವರೆ ತಿಂಗಳಲ್ಲಿ ಬೆಳೆಪರಿಹಾರ ತಲುಪಿಸಲಾಗಿತ್ತು. ಈ ಬಾರಿಯೂ ಇದೇ ಮಾದರಿಯಲ್ಲಿ ಶೀಘ್ರವಾಗಿ ಪರಿಹಾರವನ್ನು ಡಿಬಿಟಿ ಮೂಲಕ ರೈತರಿಗೆ ನೀಡಲಾಗುವುದು. ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ವಿವರವಾದ ವರದಿಯನ್ನು2-3 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಒಮಿಕ್ರಾನ್ ನ ರೂಪಾಂತರಿ ತಳಿಗಳ ಬಗ್ಗೆ ಲ್ಯಾಬ್‍ಗಳಲ್ಲಿ ಜೆನೊಮೆಟಿಕ್ಸ್ ಅಧ್ಯಯನ ಪರೀಕ್ಷೆ ನಿರಂತರವಾಗಿ ನಡೆಯುತ್ತಿದೆ. ಅದರ ಪ್ರಭಾವ, ಹರುಡುವಿಕೆಯ ಶಕ್ತಿಗಳ ಬಗ್ಗೆಯೂ ಪರೀಕ್ಷೆ ನಡೆಯುತ್ತಿದೆ. ಜನರಲ್ಲಿ ಅನಾವಶ್ಯಕವಾದ ಆತಂಕ ನಿರ್ಮಿಸುವುದು ಸರಿಯಲ್ಲ. ವಿಜ್ಞಾನಿಗಳು, ಕೇಂದ್ರ ಸರ್ಕಾರ ಹಾಗೂ ತಜ್ಞರ ನೀಡುವ ಸಲಹೆ ಸೂಚನೆಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

About The Author