Saturday, July 5, 2025

Latest Posts

ಈಜು ಬಾರದಿದ್ದರೂ ಲೆಕ್ಕಿಸದೇ ಪ್ರಯಾಣಿಕರ ರಕ್ಷಣೆ: KSRTC ಚಾಲಕ, ನಿರ್ವಾಹಕರಿಗೆ ಸಂಸ್ಥೆಯಿಂದ ಪ್ರಶಂಸೆ, ಸನ್ಮಾನ

- Advertisement -

ಬೆಂಗಳೂರು: ಆ ಚಾಲಕ ಮತ್ತು ನಿರ್ವಾಹಕರಿಗೆ ಈಜು ಬಾರದೇ ಇದ್ದರೂ ಅಂಡರ್ ಪಾಸ್ ನ ನೀರಿನಲ್ಲಿ ಸಿಲುಕಿ, ಮುಳುಗಡೆಯಾಗುತ್ತಿದ್ದಂತ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ಸಾಹಸ ಕಾರ್ಯವನ್ನು ಧೈರ್ಯದಿಂದ ಮೆರಿದ್ದರು. ಹೀಗಾಗಿ ಇಂದು ಕೆ ಎಸ್ ಆರ್ ಟಿ ಸಿಯಿಂದ ಸನ್ಮಾನಿಸಿ, ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿ ಸಿಯಿಂದ ಮಾಹಿತಿ ನೀಡಲಾಗಿದ್ದು, ಕಂಡು ಕೇಳರಿಯದ ಮಹಾ ಮಳೆಗೆ ಊರಿಗೆ ಊರೇ ನೀರಿನಲ್ಲಿ ಮುಳುಗುತ್ತಿದ್ದು, ಹೆದ್ದಾರಿಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ, ಈ ರಕ್ಕಸ ಮಳೆಯಲ್ಲಿ ಸಾರಿಗೆ ಬಸ್ಸುಗಳನ್ನು ಚಾಲನೆ ಮಾಡುವ ದೊಡ್ಡ ಸವಾಲು ನಮ್ಮ ಚಾಲನಾ ಸಿಬ್ಬಂದಿಗಳದ್ದು ಎಂದಿದೆ.

ದಿನಾಂಕ: 29.08.2022 ರಂದು ರಾಮನಗರ ಮೈಸೂರು – ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿತ್ತು. ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ – ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ನಲ್ಲಿ ಬರುತ್ತಿದ್ದ ಬಸ್ಸು ಮಳೆ ನೀರಿಗೆ ಸಿಲುಕಿ ಮುಳುಗಡೆಯಾಗಿತ್ತು. ಸ್ವಲ್ಪ ಮುಂದೆ ಇದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸಾರ್ವಜನಿಕರ ಸಹಾಯದೊಂದಿಗೆ ಸುರಕ್ಷಿತವಾಗಿ ರಕ್ಷಿಸಿ, ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದರೂ, ತಮಗೆ ಈಜಲು ಬಾರದಿದ್ದರೂ ಸಹ ಎದೆಗುಂದದೆ ಧೈರ್ಯದಿಂದ ತಮ್ಮ ಪ್ರಾಣವನ್ನೂ ಲೆಕ್ಕಿಸದೆ , ಆ ಸಮಯದಲ್ಲಿ ಏಣಿಯನ್ನು ಹುಡುಕಿ ತಂದು,  ಲಿಂಗರಾಜು, ಚಾಲಕ.ಕಂ.ನಿರ್ವಾಹಕ. ಬಿಲ್ಲೆ ಸಂಖ್ಯೆ 2621 ಹಾಗೂ ವೆಂಕಟೇಶ, ಚಾಲಕ.ಕಂ.ನಿರ್ವಾಹಕ. ಬಿಲ್ಲೆ ಸಂಖ್ಯೆ 2863 ರಾಮನಗರ ಘಟಕ, ರಾಮನಗರ ವಿಭಾಗ ದವರು, ಓರ್ವ ವೃದ್ದ ಮಹಿಳೆ ಸೇರಿ ಕೆಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು ಎಂದು ಹೇಳಿದೆ.

ಇವರು ಕೇಂದ್ರ‌ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸುತ್ತಾ,‌ ಈಜು ಬರದ ನಾವಿಬ್ಬರೂ, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಉಳಿಸಲು ಕಷ್ಟಪಟ್ಟಿದ್ದೇವೆ. ಅದೇ ರೀತಿ ಪ್ರಯಾಣಿಕರು ಕೂಡ ನಮ್ಮನ್ನು ಉಳಿಸಿದರು. ಹಾಗೂ ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್‌ಗಳು ಕೂಡ ನೀರು ತುಂಬಿ ಹಾಳಾಯಿತು. ಯಾವ ಅಧಿಕಾರಿಗಳನ್ನು ಸಂರ್ಪಕಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ನಮಗೆ ಆ ಸಮಯದಲ್ಲಿ ನಮ್ಮ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಬೇಕೆಂಬುದು ಮಾತ್ರ ಉದ್ದೇಶವಾಗಿತ್ತೆಂದು ತಿಳಿಸಿದರು.

ಈ ಮಾತನ್ನು ಕೇಳಿದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಅವರು ಚಾಲಕರನ್ನು ಮನತುಂಬಿ ಹಾರೈಸಿ, ತಮ್ಮ ಈ ಉತ್ಕೃಷ್ಟ ಕಾರ್ಯತತ್ಪರತೆ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ. ದೇವರು ತಮಗೆ ಮತ್ತು ತಮ್ಮ ಪರಿವಾರದವರಿಗೆ ಒಳ್ಳೆಯದು ಮಾಡಲಿ ಎಂದರು. ಈ ಸಮಯದಲ್ಲಿ ಸಿಬ್ಬಂದಿಗಳ ಮೊಬೈಲ್ ಹಾಳಾಗಿದ್ದಕ್ಕೆ, ಇಬ್ಬರಿಗೂ ಒಂದೊಂದು ಸ್ಮಾರ್ಟ್ ಮೊಬೈಲ್ ಫೋನ್ ಅನ್ನು ನಿಗಮದ ವತಿಯಿಂದ ಉಡುಗೊರೆಯಾಗಿ ನೀಡಿ, ಇವರ ಮಾನವೀಯ ನೆಲೆಯಲ್ಲಿನ ಸೇವಾ ಮನೋಭಾವವು ನಿಜಕ್ಕೂ ಅನನ್ಯ, ಅನುಕರಣೀಯವೆಂದು ಬಣ್ಣಿಸಿ, ಚಾಲನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿ, ಅಭಿನಂದನಾ ಪತ್ರವನ್ನು ನೀಡಿ ಶ್ಲಾಘಿಸಿದ್ದಾರೆ.

- Advertisement -

Latest Posts

Don't Miss