HD Devegouda: ದೇವೇಗೌಡರ ಜೆಡಿಎಸ್ ತೊರೆದ ಕೇರಳ ಜೆಡಿಎಸ್ ಘಟಕ

ಕೇರಳದ ಜೆಡಿಎಸ್ ಘಟಕ ಮಾತೃ ಪಕ್ಷ ಜೆಡಿಎಸ್​ನೊಂದಿಗೆ ಇರುವ ನಂಟು ಕಡಿದುಕೊಂಡಿದೆ. ಮಾಜಿ ಪ್ರಧಾನಿ ಮಣ್ಣಿನ ಮಗ ದೇವೆಗೌಡರ ನೇತೃತ್ವದ ಜಾತ್ಯಾತೀತ ಜನತಾದಳ ಪಕ್ಷದ ಸಂಬಂಧವನ್ನು ಸಂಪೂರ್ಣವಾಗಿ ಕೇರಳ ಜೆಡಿಎಸ್ ಘಟಕ ತೊರೆದಿದೆ. ಮಂಗಳವಾರ ನಡೆದ ಪಕ್ಷದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೇರಳದ ಜೆಡಿಎಸ್ ಘಟಕವು ಸಿಪಿಎಂ ನೇತೃತ್ವದ ಎಲ್​ಡಿಎಫ್​ನ ಭಾಗವಾಗಿದ್ದು, ಇಬ್ಬರು ಶಾಸಕರನ್ನು ಹೊಂದಿದೆ. ಈ ಪೈಕಿ ಒಬ್ಬರು ಕೇರಳ ಸರ್ಕಾರದ ಪಿಣರಾಯಿ ವಿಜಯನ್ ಸಂಪುಟದ ಸಚಿವರೂ ಕೂಡ ಆಗಿದ್ದಾರೆ. ಜೆಡಿಎಸ್​ನಿಂದ ಇತ್ತೀಚೆಗೆ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಕೇರಳದ ಜೆಡಿಎಸ್ ಘಟಕಕ್ಕೆ ಒಕ್ಕೂಟ ತೊರೆಯುವ ಅಥವಾ ಉಳಿಯುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲು ಸಿಪಿಎಂ ಸೂಚಿಸಿತ್ತು.
ಇದೀಗ ಜೆಡಿಎಸ್ ತೊರೆದಿರುವ ಕೇರಳ ಘಟಕ ಹೊಸ ಹೆಸರಿನಲ್ಲಿ ಪಕ್ಷವನ್ನು ನೊಂದಾಯಿಸಲು ನಿರ್ಧರಿಸಿದೆ. ಎಲ್ಲಾ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿ ತಜ್ಞರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯು ಟಿ. ಥಾಮಸ್ ಹೇಳಿದ್ದಾರೆ. ಇದರೊಂದಿಗೆ ಸದ್ಯಕ್ಕೆ ಕೇರಳದಲ್ಲಿ ಜೆಡಿಎಸ್ ಸಂಪೂರ್ಣವಾಗಿ ಮುಳುಗಿದಂತಾಗಿದೆ.

About The Author