Siddaramaiah :ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ- ಸಿಎಂ ಸಂತಸ

ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಇತ್ತೀಚಿಗೆ ವೃದ್ಧೆಯೊಬ್ಬರು ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ್ರು. ಇದು ಇಡೀ ರಾಜ್ಯದ ಗಮನ ಸೆಳೆದಿತ್ತು. ಇದೀಗ ವೃದ್ಧೆಯ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.

‘ಬೆಳಗಾವಿ‌ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೋವನ್ನು ನೋಡಿದೆ. ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೂಟಿ ಅವರು ಮನವಿ ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡಲ್ಲ, ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಈ ಮೂಲಕ ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತಿದ್ದೇನೆ ಅಂತ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

‘ನಮ್ಮ ಮಣ್ಣಿನ ಗುಣವೇ ಹಾಗೆ, ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವವಿದೆ. ಇಂತಹವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ಹೀಗಿದ್ದರೂ ಅಕ್ಕಾತಾಯಿ ಲಗೋಟಿ ಅವರಲ್ಲಿ ಒಂದು ಸವಿನಯ ವಿನಂತಿ ಇದೆ. ಊರಿಗೆ ಹೋಳಿಗೆ ಊಟ ಹಾಕುವುದು ಒಳ್ಳೆಯ ಗುಣವೇ ಸರಿ. ಆದರೆ ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಮೊದಲ ಹಕ್ಕು ಸ್ವಂತ ಕುಟುಂಬದ್ದಾಗಿದೆ.

 

ಅಕ್ಕಾತಾಯಿಯಂತಹ ಒಳ್ಳೆಯ ಮನಸ್ಸಿನ ಸೋದರಿಯರು ಈ ಹಣವನ್ನು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯಕರವಾದ ಊಟ-ತಿಂಡಿ ಮತ್ತು ಮಕ್ಕಳ ಶಿಕ್ಷಣ ನೀಡಲು ಬಳಸಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ’ ಎಂದು ಸಿಎಂ ತಿಳಿಸಿದ್ದಾರೆ.

About The Author