ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್ವುಡ್ನ ಬಹುತೇಕ ನಟ, ನಟಿಯರು ಆಕ್ಟೀವ್ ಆಗಿರೋದು ಗೊತ್ತೇ ಇದೆ. ಅದರಲ್ಲೂ ನಟ ಜಗ್ಗೇಶ್ ವಿಚಾರಕ್ಕೆ ಬಂದರೆ, ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಏನಾದರೊಂದು ಪೋಸ್ಟ್ ಹಾಕುವ ಮೂಲಕ ಸುದ್ದಿಯಲ್ಲಿರುವ ಜಗ್ಗೇಶ್, ಇದೀಗ ಪೋಸ್ಟ್ವೊಂದನ್ನು ಹಾಕುವ ಮೂಲಕ ತಾಯಿ ಕುರಿತ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿದ್ದ ತಾಯಿಯನ್ನೇ ಕೊಂದ ಮಗ ಸುದ್ದಿಯೊಂದನ್ನು ಹಂಚಿಕೊಂಡು, ತಮ್ಮ ಮನದ ದುಗುಡವನ್ನು ಹೊರಹಾಕಿದ್ದಾರೆ.
ಹೌದು, ದೊಡ್ಡಬಳ್ಳಾಪುರದಲ್ಲಿ ಮಗನೇ ತಾಯಿಯನ್ನ ಕೊಂದ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದನ್ನು ಓದಿದ ಜಗ್ಗೇಶ್, ಸ್ವತಃ ತಮ್ಮ ಇನ್ಸ್ಟಾಗ್ರಾಂನಲ್ಲಿ ಅದನ್ನು ಹಂಚಿಕೊಂಡು ಒಂದಷ್ಟು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ತಾಯಿಯನ್ನೂ ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ತಾಯಿ ಫೋಟೋ ಸೇರಿದಂತೆ ಈವರೆಗೆ ಜೋಪಾನವಾಗಿಟ್ಟುಕೊಂಡ ತಾಯಿಯ ಸೀರೆ, ಅವರು ಬಳಸುತ್ತಿದ್ದ 10 ಪೈಸೆ ನಾಣ್ಯ ಇನ್ನಿತರ ವಸ್ತುಗಳ ಫೋಟೋವನ್ನೂ ತೋರಿಸಿದ್ದಾರೆ. ಅವರು 29 ವರ್ಷ ವಯಸ್ಸಿನವರಿದ್ದಾಗಲೇ ತಾಯಿಯನ್ನ ಕಳೆದುಕೊಂಡ ಬಗ್ಗೆಯೂ ಜಗ್ಗೇಶ್ ಪ್ರಸ್ತಾಪಿಸಿದ್ದಾರೆ. ತಮ್ಮ 62ನೇ ವಯಸ್ಸಿನಲ್ಲೂ ಅಮ್ಮ ಬಳಸಿದ ವಸ್ತುಗಳನ್ನ ದೇವರ ಮನೆಯಲ್ಲಿಟ್ಟು ಈಗಲೂ ಅದನ್ನು ಪೂಜಿಸುವುದು ನಿತ್ಯ ಆಚರಣೆಯಂತಾಗಿದೆ ಎಂದಿದ್ದಾರೆ.
ಅಮ್ಮನನ್ನೇ ಮಗ ಕೊಲೆ ಮಾಡಿದ ಎಂದು ಸುದ್ದಿ ಓದಿ ಭಾವುಕರಾಗಿರುವ ಜಗ್ಗೇಶ್ ದಿನಚರಿ ಮರೆತು ಸ್ನಾನ ಪೂಜೆ ಇಲ್ಲದೆ ಶವದಂತೆ ಕುಳಿತರಂತೆ. ಹೀಗಾಗಿ ನೊಂದು ಮಾತು ಮುಂದುವರೆಸಿದ ಜಗ್ಗೇಶ್ `ತಂದೆ ತಾಯಿ ನೋಯಿಸುವವರು ನರಕ ಇಲ್ಲೇ ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.