Tumakuru News: ನಾವು ಓಡಿಸ್ಸಾ ಸೇರಿ ಬೇರೆ ಬೇರೆ ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದ್ದ ಕಾರಣ, ಕುಟುಂಬಸ್ಥರ ಶವವನ್ನು ಬೈಕ್ನಲ್ಲಿ ಸಾಗಿಸಿದ ಸುದ್ದಿಯನ್ನು ಹಲವು ಬಾರಿ ಕೇಳಿದ್ದೇವೆ. ಆದರೆ ನಮ್ಮ ರಾಜ್ಯದ ತುಮಕೂರಿನಲ್ಲಿಯೇ ಇಂಥ ಹೃದಯ ವಿದ್ರಾವಕ ಘಟನೆ ನಡೆದಿದೆ.
ತುಮಕೂರಿನ ಪಾವಗಡ ಬಳಿಯ ವೈ.ಎನ್.ಹೊಸಕೋಟೆ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಮೃತಪಟ್ಟಿರುವ ಅಪ್ಪನ ಶವ ಸಾಗಿಸಲು ಆ್ಯಂಬುಲೆನ್ಸ್ ಸಿಗದ ಕಾರಣ, ಇಬ್ಬರು ಗಂಡು ಮಕ್ಕಳು ಸೇರಿ, ಬೈಕ್ ಮೇಲೆ ಅಪ್ಪ ಶವ ಸಾಗಿಸಿದ್ದಾರೆ.
ಗುಡುಗುಲ್ಲ ಹೊನ್ನೂರಪ್ಪ ಎಂಬ 80 ವರ್ಷದ ವೃದ್ಧ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆ ತನಕ ಮಕ್ಕಳು 108 ಆ್ಯಂಬುಲೆನ್ಸ್ನಲ್ಲಿ ಕರೆತಂದಿದ್ದಾರೆ. ಆದರೆ ಅದಾಗಲೇ, ಅವರು ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದು, ಶವ ಸಾಗಿಸಲು ಆ್ಯಂಬುಲೆನ್ಸ್ ಸಿಬ್ಬಂದಿಗಳು ನಿರಾಕರಿಸಿದ್ದಾರೆ.
ಆ್ಯಂಬುಲೆನ್ಸ್ನಲ್ಲಿ ಹೆಣ ಸಾಗಿಸಲು ಅವಕಾಶವಿಲ್ಲವೆಂದು ಹೇಳಿದ ಕಾರಣ, ಕೈಯಲ್ಲಿ ಕಾಸಿಲ್ಲವೆಂದು, ಇಬ್ಬರೂ ಮಕ್ಕಳು ಅಪ್ಪನ ಶವವನ್ನು ಬೈಕ್ನಲ್ಲೇ ಕೊಂಡೊಯ್ದಿದ್ದಾರೆ. ಇಂಥ ಘಟನೆ ಪಾವಗಡದಲ್ಲಿ ಪದೇ ಪದೇ ಮರುಕಳಿಸಿದರೂ, ಅಲ್ಲಿನ ಅಧಿಕಾರಿಗಳು, ಆ ಭಾಗದ ಶಾಸಕರು, ಸಂಸದರು ಮೌನವಾಗಿರುವುದು ಮಾತ್ರ ವಿಪರ್ಯಾಸ.