Political News: ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್ನಲ್ಲಿ ಗೇಟ್ ಬಿದ್ದು ಇತ್ತೀಚೆಗೆ ಸಾವಿಗೀಡಾದ ಬಾಲಕ ನಿರಂಜನ್ ಅವರ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದರು. ಹಾಗೆಯೇ 10 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಇದೊಂದು ಮನ ಕಲಕುವ ದುರಂತ ಅಂದ್ರೆ ತಪ್ಪಾಗಲ್ಲ. ಆಡುವ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಳ್ಳುವಂತಹ ನೋವು ಯಾರಿಗೂ ಬೇಡ. ಇಂತಹ ನೋವಿನಲ್ಲಿ ಮಗನ ನೇತ್ರದಾನ ಮಾಡಿ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಡತನದಲ್ಲಿ ನಿಜವಾದ ಮಾನವೀಯತೆ ಬದುಕಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ನಮ್ಮ ಪಕ್ಷದ ಕಾರ್ಯಕರ್ತರು 5 ಲಕ್ಷ ರೂ. ನೀಡಿದ್ದು, ಬಿಬಿಎಂಪಿ 5 ಲಕ್ಷ ರೂ. ಪರಿಹಾರ ನೀಡಿದೆ. ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರ ಫೌಂಡೇಷನ್ ವತಿಯಿಂದ ಮೃತ ನಿರಂಜನ್ ಅವರ ಸಹೋದರಿಯ ಶಿಕ್ಷಣದ ಖರ್ಚನ್ನು ನೋಡಿಕೊಳ್ಳಲು ಮುಂದೆ ಬಂದಿರುವುದು ಖುಷಿಯ ವಿಚಾರ ಎಂದಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಆಡುತ್ತಿರುವಾ ಗೇಟ್ ಬಿದ್ದು, ಬಿಬಿಎಂಪಿ ಶಾಲೆಯಲ್ಲೇ 5ನೇ ತರಗತಿ ಓದುತ್ತಿದ್ದ ನಿರಂಜನ್ ಎನ್ನುವ ಬಾಲಕ ಮೃತಪಟ್ಟಿದ್ದ. ಬಿಬಿಎಂಪಿ ನಿರ್ಲಕ್ಷ್ಯ ಬಾಲಕನ ಸಾವಾಗಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದರು. ಗೇಟ್ ಬಿದ್ದು ನಿರಂಜನ್ ತಲೆಗೆ ಪೆಟ್ಟು ಬಿದ್ದಿದ್ದು, ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದ.




