ಬೈಕ್ ಮತ್ತು ಸ್ಕೂಲ್ ವ್ಯಾನ್ ನಡುವೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಬಳಿ ಸಂಭವಿಸಿದೆ. ಮದುವೆಗೆಂದು ತಲಕಾಯಲಬೆಟ್ಟಕ್ಕೆ ಬೈಕ್ನಲ್ಲಿ, ಇಬ್ಬರು ಪುರುಷರು ಮೂರು ಮಕ್ಕಳೊಂದಿಗೆ ಹೋಗುತ್ತಿದ್ರು. ಆ ವೇಳೆ ಖಾಸಗಿ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 34 ವರ್ಷದ ಬಾಲಾಜಿ, 50 ವರ್ಷದ ವೆಂಕಟೇಶಪ್ಪ, 1 ವರ್ಷದ ಹರೀಶ್, 3 ವರ್ಷದ ಆರ್ಯ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಬುರುಡುಗುಂಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ ವಾಹನದಲ್ಲಿದ್ದ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ಇನ್ನು ಮೃತರೆಲ್ಲರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ತಾಡಿಗೊಳ್ಳು ಗ್ರಾಮದ ನಿವಾಸಿಗಳು. ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ಮೃತರ ಸಂಖ್ಯೆ ಏರಿಕೆಯಾಗಿದೆ. ಬುರುಡುಗುಂಟೆ ಗ್ರಾಮ ಮತ್ತು ದಿಬ್ಬೂರಹಳ್ಳಿ ಗ್ರಾಮದಲ್ಲೂ ಆ್ಯಂಬುಲೆನ್ಸ್ ಇಲ್ಲದಿರುವುದು, ಜನರ ಜೀವಕ್ಕೇ ಕುತ್ತು ತಂದಿದೆ. ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ 6 ವರ್ಷಗಳಲ್ಲಿ ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, 60 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, ಮೈಸೂರು, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಅಪಘಾತಗಳು ವರದಿಯಾಗಿವೆ. ವೇಗದ ಚಾಲನೆ ಮತ್ತು ಮದ್ಯ ಸೇವನೆಯೇ ಈ ದುರ್ಘಟನೆಗಳಿಗೆ ಪ್ರಮುಖ ಕಾರಣವಂತೆ.

