ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂತಿಮ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿ ದಿನವಾದ ಅಕ್ಟೋಬರ್ 2, ಗುರುವಾರ ನಡೆಯಲಿದೆ. ಹನ್ನೊಂದು ದಿನಗಳ ನಾಡಹಬ್ಬಕ್ಕೆ ಇದರೊಂದಿಗೆ ತೆರೆ ಬೀಳಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಮಾರ್ಗವನ್ನು ಅಂದಗೊಳಿಸುವ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಕಟ್ಟುಕಥೆಯಂತೆ ಜಾರಿಗೊಳಿಸಿದೆ.
ಅ.2ರಂದು ಮಧ್ಯಾಹ್ನ 1.00ರಿಂದ 1.18ರೊಳಗಿನ ಶುಭ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಸಂಜೆ 4.42ರಿಂದ 5.06ರ ನಡುವೆ ಕುಂಭ ಲಗ್ನದಲ್ಲಿ, ಗಜರಾಜ ಅಭಿಮನ್ಯು ಹೊತ್ತಿರುವ 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಲಿದೆ. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅರಮನೆ ಆವರಣದಲ್ಲಿ ಆಹ್ವಾನಿತರು, ಗಣ್ಯರು, ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ನಗರ ಬಸ್ ನಿಲ್ದಾಣದ ಎದುರು ಪಾದಚಾರಿಗಳ ಮಾರ್ಗದಲ್ಲಿಯೂ ಮಹಾನಗರ ಪಾಲಿಕೆ ಆಸನ ವ್ಯವಸ್ಥೆ ಒದಗಿಸಿದೆ.
ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ, ನಾದಸ್ವರ, ನೌಫತ್, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್ ಸೇರಿದಂತೆ ಹಲವು ತಂಡಗಳು ಭಾಗವಹಿಸಲಿವೆ. 58 ಸ್ತಬ್ಧಚಿತ್ರಗಳು ಹಾಗೂ ಜನಪದ ಕಲಾ ತಂಡಗಳು ನಾಡಿನ ಕಲೆ-ಸಂಸ್ಕೃತಿಯನ್ನು ಪ್ರತಿಬಿಂಬಿಸಲಿವೆ. ಕೊನೆಯಲ್ಲಿ ಗಜರಾಜ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊತ್ತು, ಸಂಗಾತಿಗಳಾದ ಕಾವೇರಿ ಹಾಗೂ ರೂಪಾ ಜೊತೆ ಐದೂ ಕಿ.ಮೀ.ದೂರದ ಬನ್ನಿಮಂಟಪ ತಲುಪಲಿದ್ದಾನೆ.
ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸುವರು. ಸಿಎಂ ಹಾಗೂ ಸಚಿವ ಸಂಪುಟ ಸದಸ್ಯರು ಭಾಗವಹಿಸಲಿದ್ದಾರೆ. ಇದರೊಂದಿಗೆ ಈ ಬಾರಿಯ ದಸರಾ ಸಂಭ್ರಮಕ್ಕೆ ತೆರೆ ಬೀಳಲಿದೆ. ಅ.1ರಂದು ರಾಜವಂಶಸ್ಥ ಯದುವೀರ ಒಡೆಯರ್ ಅವರಮನೆಯಲ್ಲಿ ಆಯುಧಪೂಜೆ ನೆರವೇರಿಸಲಿದ್ದಾರೆ. ಅ.2ರಂದು ಬೆಳಗ್ಗೆ ಖಾಸಗಿ ವಿಜಯದಶಮಿ ಮೆರವಣಿಗೆ ನಡೆಸಲಿದ್ದು, ನಂತರವೇ ಸರ್ಕಾರಿ ದಸರಾ ಜಂಬೂಸವಾರಿ ಆರಂಭವಾಗಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

