ಹೈದರಾಬಾದ್ : ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಾರಿನೊಳಗೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದುರಂತ ವಿಜಯನಗರಂನ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ನಡೆದಿದೆ.
ಪೋಷಕರ ಹುಡುಕಾಟದ ಬಳಿಕ ಘಟನೆ ಬೆಳಕಿಗೆ..
ಇನ್ನೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಹೋಗಿದ್ದು, ಕೂಡಲೇ ಕಾರಿನ ಬಾಗಿಲುಗಳು ಲಾಕ್ ಆಗಿದ್ದು, ಮಕ್ಕಳು ಅಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಬೆಳಿಗ್ಗೆಯಿಂದ ಮಕ್ಕಳು ಕಾಣದ್ದಕ್ಕೆ ಪೋಷಕರು ಹುಡುಕಾಟ ನಡೆಸಿದ್ದರು. ಕೊನೆಗೆ, ಸ್ಥಳೀಯ ಮಹಿಳಾ ಮಂಡಳಿ ಕಚೇರಿಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳ ಶವಗಳು ಪತ್ತೆಯಾಗಿವೆ. ಭಾನುವಾರ ಬೆಳಿಗ್ಗೆ 8 ವರ್ಷದ ಉದಯ್, 8 ವರ್ಷದ ಚಾರುಮತಿ, 6 ವರ್ಷದ ಚರಿಷ್ಮಾ ಮತ್ತು 6 ವರ್ಷದ ಮನಸ್ವಿ ಆಟವಾಡಲು ಹೊರಗೆ ಹೋಗಿದ್ದರು. ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರು, ಉಳಿದ ಇಬ್ಬರು ಅವರ ಸ್ನೇಹಿತರಾಗಿದ್ದರು. ಈ ಮಕ್ಕಳು ಬಹಳ ಸಮಯವಾದರೂ ಮನೆಗೆ ಹಿಂತಿರುಗದಿದ್ದಾಗ, ಅವರ ಪೋಷಕರು ಅವರನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಕಾರಿನಲ್ಲಿಯೇ ಉಸಿರುಗಟ್ಟಿದ್ದ ಮಕ್ಕಳು..
ಆದರೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಮಳೆ ಪ್ರಾರಂಭವಾಗಿದೆ, ಇದರಿಂದ ರಕ್ಷಣೆಗಾಗಿ ಪಕ್ಷದಲ್ಲಿಯೇ ಇದ್ದ ಕಾರೊಂದರ ಬಾಗಿಲು ಓಪನ್ ಮಾಡಿ ಮಕ್ಕಳು ಕೂಡಲೇ ಕಾರಿನೊಳಗೆ ಕೂತು ಆಟ ಆಡಲು ಶುರು ಮಾಡಿದ್ದಾರೆ. ಆದರೆ ನಂತರ ಬಾಗಿಲುಗಳು ಆಕಸ್ಮಿಕವಾಗಿ ಲಾಕ್ ಆಗಿ, ಮಕ್ಕಳು ಒಳಗೆ ಸಿಲುಕಿಕೊಂಡ ನಾಲ್ವರೂ ಉಸಿರುಗಟ್ಟಿತ್ತು. ಸಂಜೆಯ ಹೊತ್ತಿಗೆ ಕಾರನ್ನು ಗಮನಿಸಿ ಗಾಚು ಒಡೆದು ಮಕ್ಕಳು ಅಸ್ವಸ್ಥರಾಗಿರುವುದನ್ನು ಗಮನಿಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಉಸಿರಾಟ ಸಾಧ್ಯವಾಗದೆ ಮಕ್ಕಳು ಮೃತ ಪಟ್ಟಿದ್ದಾರೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ. ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಒಳಗಡೆ ವಿಪರೀತ ತಾಪಮಾನ ಏರಿಕೆಯಾಗಿ ಮಕ್ಕಳು ಪ್ರಜ್ಞೆ ತಪ್ಪಿದ್ದರು.
ಲಾಕ್ ಮಾಡದೇ ಮರೆತು ಹೋಗಿದ್ದ ಚಾಲಕ..
ಇನ್ನೂ ಪ್ರಮುಖವಾಗಿ ಎರಡು ದಿನಗಳ ಹಿಂದಷ್ಟೇ ದ್ವಾರಪುಡಿ ಗ್ರಾಮದಲ್ಲಿ ಮಹಿಳಾ ಮಂಡಳಿಯ ಕಚೇರಿಯ ಬಳಿ ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿ ಅದರ ಬಾಗಿಲುಗಳನ್ನು ಲಾಕ್ ಮಾಡದೇ ಹಾಗೆಯೇ ಬಾಗಿಲನ್ನು ಮುಚ್ಚಿ ಹೋಗಿದ್ದರು. ಇದರಿಂದ ಮಕ್ಕಳು ಬಾಗಿಲನ್ನು ತೆಗೆಯಲು ಸಾಧ್ಯವಾಗಿದೆ. ಈ ರೀತಿಯಾಗಿ ಮಾಡುವ ನಮ್ಮ ಒಂದು ತಪ್ಪು ಅನೇಕ ಅವಾಂತರಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದೇ ನೈಜ ಉದಾಹರಣೆಯಾಗಿದೆ. ಇನ್ನೂ ಕಾರ್ ಚಾಲಕನು ತನ್ನ ಸಮಯ ಪ್ರಜ್ಞೆಯಿಂದ ಸರಿಯಾಗಿ ಕಾರಿನ ಬಾಗಿಲನ್ನು ಲಾಕ್ ಮಾಡಿಕೊಂಡು ಹೋಗಿದ್ದರೆ, ಈ ಅಮಾಯಕ ಮಕ್ಕಳಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ.. ಏನೇ ಆಗಲಿ ಮಕ್ಕಳೆಂದರೆ ಆಡ ಆಡುವುದು ಸಹಜ, ಆದರೆ ಮಳೆ ಬಂತೆಂದು ಆಸರೆಗೆ ಹೋಗಿ ಈ ರೀತಿಯಾಗಿ ದುರಂತ ಅಂತ್ಯ ಕಂಡದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..!