Thursday, June 19, 2025

Latest Posts

ಮೋದಿ ಗಾಯಬ್‌ ಮಾಡಲು ಹೋಗಿದ್ದ “ಕೈ” ಗೆ, ಬಿಜೆಪಿಯಿಂದ ಪಾಕ್‌ ಏಜೆಂಟ್‌ ಪಟ್ಟ : ಈಗ ಬೇಕಿತ್ತಾ ರಾಜಕೀಯ..?

- Advertisement -

ನವದೆಹಲಿ : ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಬಲಿಯಾಗಿದ್ದಾರೆ. ಭಯೋತ್ಪಾದನೆಗೆ ಬೆಂಬಲವಾಗಿ ಈ ಹೇಯ ಕೃತ್ಯ ಮಾಡಲು ಕಾರಣವಾಗಿರುವ ಪಾಕಿಸ್ತಾನಕ್ಕೆ ಭಾರತ ಒಂದಾದ ಮೇಲೊಂದರಂತೆ ತಕ್ಕ ಪಾಠಗಳನ್ನು ಕಲಿಸುತ್ತಿದೆ.

ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಹೊಲಸ್ಸು ರಾಜಕೀಯ ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಸಾರ್ವಜನಿಕರು ಛೀ ಥೂ ಎಂದು ಉಗಿಯುತ್ತಿದ್ದಾರೆ. ಉಗ್ರರು ದೇಶದೊಳಗೆ ನುಗ್ಗಿ ನಮ್ಮವರನ್ನೇ ಬಲಿ ಪಡೆಯುತ್ತಿದ್ದಾರೆ. ಇಂತಹ ವೇಳೆಯಲ್ಲಿ ಒಗ್ಗಟ್ಟು ತೋರಬೇಕಿದ್ದ ರಾಜಕೀಯ ನಾಯಕರ ಕೆಸರೆರಚಾಟವನ್ನು ಎಲ್ಲರೂ ಕಟುವಾಗಿ ಟೀಕಿಸುತ್ತಿದ್ದಾರೆ.

ಮೋದಿ ಅಣಕು ಮಾಡಲು ಹೋಗಿ ಗುಮ್ಮಿಸಿಕೊಂಡ ಕೈ..

ಸರ್ವ ಪಕ್ಷದ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರು ಗೈರಾಗಿದ್ದಕ್ಕೆ ಕಾಂಗ್ರೆಸ್‌ ಕಿಡಿ ಕಾರಿತ್ತು. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರೇ ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೇ ಕಾಂಗ್ರೆಸ್‌, ದೇಶ ವಿರೋಧಿಗಳಿಗೆ ಆಹಾರವಾಗುವಂತೆ ಸಾಮಾಜಿಕ ಜಾಲತಾಣಲ್ಲಿ ಪ್ರಧಾನಿ ಮೋದಿಯವರನ್ನು ಅಣಕು ಮಾಡಿದೆ. ತಾನು ಮಾಡಿರುವ ಟ್ವಿಟ್‌ನಲ್ಲಿ, ತಲೆಯಿಲ್ಲದ ವ್ಯಕ್ತಿಯ ಮೇಲೆ ಬರೆಯಲಾಗಿರುವ ಗಯಾಬ್ ಅಂದರೆ ಕಾಣೆಯಾಗಿದೆ ಎನ್ನುವ ಪದ ಕಾಣುತ್ತದೆ. ಆ ಆಕೃತಿಗೆ ಮುಖವಿಲ್ಲದಿದ್ದರೂ, ಅದು ಬಂಧ್‌ಗಲಾ ಕುರ್ತಾ, ಚೂಡಿದಾರ್ ಪೈಜಾಮ ಮತ್ತು ಕಪ್ಪು ಬಣ್ಣದ ಪಾದರಕ್ಷೆಗಳನ್ನು ಧರಿಸಿದ್ದಂತೆ ತೋರುತ್ತಿದೆ. ಥೇಟ್‌ ಮೋದಿಯವರನ್ನು ಹೋಲುವ ಈ ಫೋಟೋವನ್ನು ಪೋಸ್ಟ್‌ ಮಾಡುವ ಮೂಲಕ ರಾಜಕೀಯ ಮಾಡಲು ಹೊರಟಿದ್ದ ಕಾಂಗ್ರೆಸ್‌ಗೆ ಬಿಜೆಪಿ ಸರಿಯಾಗಿಯೇ ಗುಮ್ಮಿದೆ.

ಕಾಂಗ್ರೆಸ್‌ ಕಾ ಹಾಥ್‌, ಪಾಕಿಸ್ತಾನ್‌ಕೇ ಸಾಥ್‌ ಬಿಜೆಪಿ ಕೌಂಟರ್..!

ಇನ್ನೂ ಕಾಂಗ್ರೆಸ್‌ನ ಈ ಟ್ವಿಟ್‌ಗೆ ರೀಟ್ವಿಟ್‌ ಮಾಡಿ ಪಾಕಿಸ್ತಾನದ ಸಚಿವ ಫವಾದ್‌ ಹುಸೇನ್‌, ನಾಟಿ ಕಾಂಗ್ರೆಸ್‌ ಎನ್ನುವ ಹ್ಯಾಶ್‌ಟ್ಯಾಗ್‌ ಜೊತೆ ಈ ಪೋಸ್ಟರ್‌ ಅನ್ನು ಮತ್ತೊಮ್ಮೆ ಹಂಚಿಕೊಂಡು, ಕತ್ತೆಗೆ ಕೊಂಬು ಇಲ್ಲದ್ದನ್ನು ನೋಡಿದ್ದೇವೆ, ಆದರೆ ಇದರಲ್ಲಿ ಮೋದಿಗೆ ತಲೆಯೇ ಇಲ್ಲ ಎಂದು ಬರೆದುಕೊಂಡಿದ್ದಾನೆ. ಇದರಿಂದ ಕೆರಳಿ ಕೆಂಡವಾಗಿರುವ ಬಿಜೆಪಿಯು, ಕಾಂಗ್ರೆಸ್‌ ಕಾ ಹಾಥ್‌, ಪಾಕಿಸ್ತಾನ್‌ಕೇ ಸಾಥ್‌ ಎಂದು ಟ್ವಿಟ್‌ ಮಾಡುವ ಮೂಲಕ ಕೈ ಪಡೆಗೆ ತಿರುಗೇಟು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್‌ , ವಿಜಯ್‌ ವಡೆಟ್ಟಿವಾರ್‌, ಮಣಿ ಶಂಕರ್‌ ಅಯ್ಯರ್‌ ಪೋಟೋಗಳನ್ನು ಹಂಚಿಕೊಂಡಿದೆ. ಅದರಲ್ಲಿ ಪಾಕಿಸ್ತಾನದ ಏಜೆಂಟ್‌ಗಳು ಎಂದು ಬಿಜೆಪಿ ಬರೆದಿದೆ. ಅಲ್ಲದೆ ಪಾಕಿಸ್ತಾನದ ಮಾಜಿ ಸಚಿವ ಟ್ವಿಟ್‌ ಮಾಡಿದ ಬೆನ್ನಲ್ಲಿಯೇ ದೇಶದಲ್ಲಿ ರಾಜಕೀಯ ನಾಯಕರ ವಾಕ್ಸಮರ ಇನ್ನಷ್ಷು ಜೋರಾಗಿದೆ. ಈ ಬೆಳವಣಿಗೆಯು ಬಿಜೆಪಿ ಹಾಗೂ ದೇಶದ ಜನರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅಲ್ಲದೆ ಕೈ ನಾಯರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ ಇಸ್ಲಾಮಾಬಾದ್‌ ಅನುಸರಿಸುತ್ತಿದೆ..

ಕಾಂಗ್ರೆಸ್‌ ಮಾಡಿರುವ ಟ್ವಿಟ್‌ಗೆ ಬಿಜೆಪಿಯ ಐಟಿ ಸೆಲ್‌ ಉಸ್ತುವಾರಿ ಅಮಿತ್‌ ಮಾಳವೀಯ, ಇವರು ಪಾಕಿಸ್ತಾನದ ಸ್ಲೀಪರ್‌ ಸೆಲ್‌ಗಳಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಇದು ಪಾಕಿಸ್ತಾನದ ಪಿಆರ್‌ ಏಜೆಂಟ್‌ಗಳು ಎಂದು ಬರೆದಿರುವ ಪೋಸ್ಟರ್‌ ಅನ್ನು ಹಂಚಿಕೊಂಡು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಂತೆ ಮಾತನಾಡುವುದಲ್ಲದೆ, ಅವರ ಕಾರ್ಯ ಸಂಸ್ಕೃತಿ ಮತ್ತು ಪದ್ಧತಿಗಳು ಇಸ್ಲಾಮಾಬಾದ್‌ನಂತೆಯೇ ಇವೆ ಎಂದು ಅವರು ಟೀಕಿಸಿದ್ದಾರೆ. ಕಾಂಗ್ರೆಸ್‌ನವರ ಬೇಜವಾಬ್ದಾರಿ ಮತ್ತು ಖಂಡನೀಯ ಹೇಳಿಕೆಗಳನ್ನು ನೋಡಿದಾಗ ಸಂತ್ರಸ್ತ ಕುಟುಂಬಗಳ ಸಾವಿನಲ್ಲೂ ಅವರ ಘನತೆಯನ್ನು ತಿರಸ್ಕರಿಸುವ ಹಂತಕ್ಕೆ ತಲುಪಿದೆ. ಉಗ್ರರ ಹತ್ಯೆಗಳಿಗೆ ಅಪಾರ ಸಾಕ್ಷ್ಯಗಳಿವೆ. ಪ್ರತ್ಯಕ್ಷದರ್ಶಿಗಳಿಂದ ಬಂದ ನೇರ ಹೇಳಿಕೆಗಳ ಹೊರತಾಗಿಯೂ, ಕಾಂಗ್ರೆಸ್ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತನ್ನ ತಲೆಯನ್ನು ಹೂತುಹಾಕಿಕೊಂಡಿದೆ ಎಂದು ಮಾಳವೀಯಾ ತಮ್ಮ ಟ್ವಿಟ್‌ನಲ್ಲಿ ಕಿಡಿಕಾರಿದ್ದಾರೆ.

ರಾಜಕೀಯದ ಹೊರತಾಗಿ ನಮ್ಮ ಬೆಂಬಲವಿರಬೇಕು..!

ಕುತಂತ್ರಿಗಳ ಬೆದರಿಕೆಗೆ ದೇಶದಲ್ಲಿನ ಎಲ್ಲ ರಾಜಕೀಯ ನಾಯಕರು ಒಂದಾಗಿ ಸೂಕ್ತ ಉತ್ತರ ನೀಡುವುದನ್ನು ಬಿಟ್ಟು, ಇದರಲ್ಲೂ ಸಹ ರಾಜಕೀಯಕ್ಕೆ ಇಳಿದಿರುವುದು ನಿಜಕ್ಕೂ ದುರಂತ..! ಒಂದು ಜವಬ್ದಾರಿಯುತ ಪಕ್ಷವಾಗಿ ಕಾಂಗ್ರೆಸ್‌ ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಿ ಕಡು ವೈರಿಗಳಿಗೆ ಆಹಾರವಾಗಿರುವುದು ಎಷ್ಟು ಸರಿ.? ಎಂಬ ಪ್ರಶ್ನೆಯನ್ನು ಭಾರತೀಯರು ಎತ್ತುತ್ತಿದ್ದಾರೆ. ಎಷ್ಟೇ ರಾಜಕೀಯ ವೈರತ್ವ ಇರಲಿ, ಅದು ನಮ್ಮ ದೇಶದಲ್ಲಿಯೇ ಇರಬೇಕು, ಅದನ್ನು ಬಿಟ್ಟು ಮೂರನೇಯವರಿಗೆ ಅದು ಮನರಂಜನೆಯ ವಿಚಾರವಾಗಬಾರದು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ದೇಶದ ವಿಚಾರ ಬಂದಾಗ ಎಲ್ಲ ಮರೆತು ಯಾರೇ ಆಗಿರಲಿ ಪ್ರಧಾನಿ ಸ್ಥಾನದಲ್ಲಿದ್ದರೆ ಅವರನ್ನು ನಮ್ಮ ಪ್ರಧಾನಿ ಎಂತಲೇ ಒಪ್ಪಿಕೊಳ್ಳಬೇಕು.

ಜೊತೆಗೆ ದೇಶಕ್ಕೆ ತೊಂದರೆ ಉಂಟಾದಾಗ, ಭದ್ರತೆಯ ಪ್ರಶ್ನೆ ಎದುರಾದಾಗ ಪ್ರತಿಯೊಬ್ಬರು ಅವರೊಂದಿಗೆ ಗಟ್ಟಿಯಾಗಿ ನಿಲ್ಲಬೇಕಾಗಿರುವುದು ಭಾರತೀಯರಾದ ನಮ್ಮ ಕರ್ತವ್ಯವಾಗಿದೆ ಎನ್ನುವುದನ್ನು ಮರೆಯದಿರೋಣ.. ಅದೇನೆ ಇರಲಿ.. ನಾವು ನಮ್ಮಲ್ಲಿನ ವೈಫಲ್ಯಗಳನ್ನು ಶತ್ರುಗಳ ಎದುರು ಬಿಚ್ಚಿಟ್ಟಾಗ ನಮ್ಮನ್ನು ಕಡೆಗಣಿಸಿ ನಮ್ಮಿಂದಲೇ ಲಾಭವಾಗುವಂತೆ ಮಾಡಿಕೊಳ್ಳುತ್ತಾರೆ. ಪಾಕಿಸ್ತಾನಿಗಳನ್ನು ಬಗ್ಗು ಬಡಿಯಲು ಭಾರತೀಯ ಸೇನೆ ಸಿದ್ಧವಾಗಿರುವ ಈ ಸಮಯದಲ್ಲಿ ದೇಶದಲ್ಲಿನ ಜವಾಬ್ದಾರಿಯುತ ರಾಜಕೀಯ ನಾಯಕರ ಕೀಳು ಮಟ್ಟದ ರಾಜಕೀಯ ನಿಜಕ್ಕೂ ಭಾರತೀಯರಿಗೆ ನೋವಾಗುವಂತೆ ಮಾಡಿದೆ. ದೇಶದ ಭದ್ರತೆಯ ವಿಚಾರದಲ್ಲಿ ಇನ್ನಾದರೂ ಈ ರೀತಿಯ ಹೀನ ರಾಜಕೀಯಕ್ಕೆ ಈ ಎಲ್ಲ ರಾಜಕೀಯ ನಾಯಕರು ಇಳಿಯದಿರಲಿ ಎನ್ನುವುದೇ ಕೋಟ್ಯಂತರ ಭಾರತೀಯರ ಒತ್ತಾಯವಾಗಿದೆ.

- Advertisement -

Latest Posts

Don't Miss