ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಇಒ ಸರ್ವೇಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಪಿಡಿಒಗಳಿಗೆ ಇಒ ಸರ್ವೇಶ್ ಕಿರುಕುಳ ನೀಡುತ್ತಿದ್ದಾರಂತೆ. ಹೀಗಾಗಿ ಸಿಇಒ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರನ್ನು ಪಿಡಿಒಗಳು ಭೇಟಿಯಾಗಿ ದೂರು ನೀಡಿದ್ದಾರೆ.
ಈ ವೇಳೆ ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಇಒ ಸರ್ವೇಶ್ ವಿರುದ್ಧ ಕ್ರಮ ಕೈಗೊಳ್ಳದಿದ್ರೆ, ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಿರುಕುಳ ಆರೋಪ ಮಾತ್ರವಲ್ಲದೇ ಇಒ ಸರ್ವೇಶ್ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪವನ್ನೂ ಮಾಡಲಾಗಿದೆ. ಸರ್ವೇಶ್ ವಿರುದ್ಧ ತಾಲ್ಲೂಕು ಕಚೇರಿ ಮುಂದೆ ವಿವಿಧ ಸಂಘಟನೆಗಳು ಸತ್ಯಾಗ್ರಹ ಮಾಡುತ್ತಿವೆ. ಇಷ್ಟೆಲ್ಲಾ ಆರೋಪಗಳು, ಹೋರಾಟ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು, ಪಿಡಿಒಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಳಬಾಗಿಲು ತಾಲೂಕಿನಲ್ಲಿ 7 ವರ್ಷಗಳಿಂದ ಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಸರ್ವೇಶ್, ಪಿಡಿಓ ಹಾಗೂ ಸಿಬ್ಬಂದಿಯಿಂದ ವಸೂಲಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ 25ಕ್ಕೂ ಹೆಚ್ಚು ಪಿಡಿಓಗಳು ಸಿಇಒಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಇನ್ನು, ಮುಳಬಾಗಿಲು ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್ ಬಳಿಯೂ ಪಿಡಿಒಗಳು, ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ, ಪಿಡಿಒಗಳ ಬೆನ್ನಿಗೆ ಶಾಸಕರೂ ನಿಂತಿದ್ದು, ತಕ್ಷಣವೇ ಇಒ ಸರ್ವೇಶ್ರನ್ನ ವರ್ಗಾವಣೆ ಮಾಡದಿದ್ರೆ, ಪಿಡಿಒಗಳೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

