ನವೆಂಬರ್ ಕ್ರಾಂತಿಯ ಮಧ್ಯೆ ಸಿಎಂ ಸಿದ್ದರಾಮಯ್ಯ ಬಣದ ತಂತ್ರಗಾರಿಕೆ ಮುಂದುವರೆದಿದೆ. ಮತ್ತೊಂದು ಡಿನ್ನರ್ ಪಾಲಿಟಿಕ್ಸ್ಗೆ ಮುಹೂರ್ತ ನಿಗಧಿಯಾಗಿದೆ. ಮಾಜಿ ಸಚಿವ ಕೆ.ಎನ್ ರಾಜಣ್ಣ ಮನೆಯಲ್ಲಿ, ನವೆಂಬರ್ 7ರಂದು ಔತಣಕೂಟ ಏರ್ಪಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ, ಸಿದ್ದು ಬಣದ ಸಚಿವರೆಲ್ಲಾ ಈ ಡಿನ್ನರ್ನಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 3ರಂದು ಸಿದ್ದು ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ರು. ಬಳಿಕ ಮೊನ್ನೆಯೂ ರಾಜ್ಯೋತ್ಸವ ಪ್ರಶಸ್ತಿ ಹೆಸರಲ್ಲಿ ಡಿನ್ನರ್ ಆಯೋಜಿಸಿದ್ರು. ಆ ವೇಳೆ ಬಿಹಾರ ಚುನಾವಣೆ ವಿಚಾರ ಮುಖ್ಯವಾಗಿ ಚರ್ಚಿಸಲಾಗಿತ್ತಂತೆ. ಈ ಎರಡೂ ಔತಣಕೂಟಗಳ ಬಳಿಕ ಹಲವು ಸಚಿವರು ತಮ್ಮ ಸ್ಥಾನ ತ್ಯಾಗಕ್ಕೆ ಸಿದ್ಧರಾಗಿದ್ದೇವೆಂದು, ಬಹಿರಂಗವಾಗೇ ಹೇಳಿಕೊಂಡಿದ್ದು ಪರಮಾಶ್ಚರ್ಯ.
ತುಮಕೂರಿನ ಕೆ.ಎನ್ ರಾಜಣ್ಣ ಮನೆಯಲ್ಲಿ ಡಿನ್ನರ್ ಪಾರ್ಟಿ ಏರ್ಪಡಿಸಲಾಗಿದೆ. ಬಿಹಾರ ರಿಸೆಲ್ಟ್ ಬಳಿಕ ದೆಹಲಿಗೆ ಸಿದ್ದರಾಮಯ್ಯ ಹೋಗುತ್ತಿದ್ದು, ಹೈಕಮಾಂಡ್ ಭೇಟಿಗೂ ಮೊದಲೇ ರಾಜಕೀಯ ತಂತ್ರಗಾರಿಕೆಯಲ್ಲಿ, ಸಿದ್ದು ಅಂಡ್ ಟೀಮ್ ಬ್ಯುಸಿಯಾಗಿದ್ದಾರೆ.
ಸರ್ಕಾರಿ ಕಾರ್ಯಕ್ರಮ ನಿಮಿತ್ತ ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ, ರಾಜಣ್ಣ ಮನೆಯಲ್ಲಿ ನಡೆಯಲಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಹೈಕಮಾಂಡ್ ಎದುರು ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚಿಸಬೇಕು. ಪುನಾರಚನೆ ವೇಳೆ ಯಾರಿಗೆಲ್ಲಾ ಚಾನ್ಸ್ ಕೊಡಬೇಕು. ಅಥವಾ ತಮ್ಮ ಇಚ್ಚೆಗೆ ವಿರುದ್ಧವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ಏನ್ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಯಲಿದೆಯಂತೆ.
ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ರಾಜಣ್ಣರನ್ನ ಸಂಪುಟದಿಂದ ತೆಗೆದು ಹಾಕಲಾಗಿತ್ತು. ಸಿದ್ದು ಶತಪ್ರಯತ್ನ ಮಾಡಿದ್ರೂ, ರಾಜಣ್ಣರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇನ್ನು, 5 ವರ್ಷ ಸಿದ್ದರಾಮಯ್ಯ ಸಿಎಂ ಆಗೇ ಇರ್ತಾರೆ. ಮೊದಲು ಸೆಪ್ಟೆಂಬರ್ ಕ್ರಾಂತಿಯ ಗುಲ್ಲೆಬ್ಬಿಸಿದ್ದು ರಾಜಣ್ಣ. ಈಗ ಇದೇ ರಾಜಣ್ಣ ಮನೆಯಲ್ಲಿ ಔತಣ ಕೂಟ ನಡೀತಿದೆ.
ತುಮಕೂರು ಉಸ್ತುವಾರಿ ಆಗಿರುವ ಜಿ. ಪರಮೇಶ್ವರ್ ಇದ್ದೇ ಇರ್ತಾರೆ. ಜೊತೆಗೆ ಯಾವೆಲ್ಲಾ ಶಾಸಕರು, ಸಚಿವರು ಭಾಗಿಯಾಗ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

