ಜಮ್ಮುಕಾಶ್ಮೀರದಲ್ಲಿ ನವೀಕೃತ ಮಸೀದಿಯೊಂದರ ನಾಮಫಲಕದಲ್ಲಿ ಅಳವಡಿಸಿದ್ದ ರಾಷ್ಟ್ರ ಲಾಂಛನವನ್ನು, ಮುಸ್ಲಿಮರ ಗುಂಪೊಂದು ವಿರೂಪಗೊಳಿಸಿದೆ. ಶ್ರೀನಗರದ ಹಜರತ್ ಬಲ್ ದರ್ಗಾದಲ್ಲಿದ್ದ ಅಶೋಕ ಲಾಂಛನವಿದ್ದ ಶಿಲಾಫಲಕವನ್ನು, ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ್ದಾರೆ.
ಜಮ್ಮುಕಾಶ್ಮೀರದ ವಕ್ಫ್ ಮಂಡಳಿಯಿಂದ ದರ್ಗಾವನ್ನು, ನವೀಕರಣ ಮಾಡಲಾಗಿತ್ತು. ದರ್ಗಾದ ಎದುರು ಶಿಲಾಫಲಕ ಸ್ಥಾಪಿಸಲಾಗಿತ್ತು. ಅದರಲ್ಲಿ ಒಂದು ಕಡೆ ಅಶೋಕ ಸ್ತಂಭದ ಲಾಂಛನವನ್ನು ಕೆತ್ತಲಾಗಿತ್ತು. ಇದು ಇಸ್ಲಾಂ ತತ್ವಗಳಿಗೆ ವಿರುದ್ಧವಾಗಿದೆ. ಧಾರ್ಮಿಕ ಸ್ಥಳದಲ್ಲಿ ರಾಷ್ಟ್ರ ಲಾಂಛನ ಧಾರ್ಮಿಕ ನಂಬಿಕೆಗೆ ಧಕ್ಕೆ ಎಂದು ಆರೋಪಿಸಿ, ರಾಷ್ಟ್ರ ಲಾಂಛನವನ್ನೇ ವಿರೂಪಗೊಳಿಸಿದ್ದಾರೆ. ಆರೋಪಿಗಳ ವಿರುದ್ಧ ಸಾರ್ವಜನಿಕ ಭದ್ರತೆಗೆ ಧಕ್ಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಲಾಂಛನ ವಿರೂಪವನ್ನು ಸಮರ್ಥಿಸಿಕೊಂಡಿದ್ದಾರೆ. ಧಾರ್ಮಿಕ ಕೇಂದ್ರದಲ್ಲಿ ರಾಷ್ಟ್ರ ಲಾಂಛನ ಹಾಕುವ ಅಗತ್ಯವೇನಿತ್ತು. ಮೊದಲು ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತೀರಿ. ಬಳಿಕ ಪಿಎಸ್ಎ ಕಾಯ್ದೆ ಹಾಕುತ್ತೀರಿ ಎಂದಿದ್ದಾರೆ.
ಉಪರಾಜ್ಯಪಾಲ ಮನೋಜ್ ಸಿನ್ಹಾ ಘಟನೆ ಕುರಿತು ಆಕ್ರೋಶ ಹೊರಹಾಕಿದ್ದು, ಅಶೋಕ ಲಾಂಛನವು ನಮ್ಮ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ಇಂತಹ ಕೃತ್ಯ ನಮ್ಮ ರಾಷ್ಟ್ರೀಯ ಭಾವನೆಗಳಿಗೆ ನೋವುಂಟು ಮಾಡುತ್ತವೆ ಮತ್ತು ಇದನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ